ಪುತ್ತೂರು: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕನೇ ಅಡವಿಟ್ಟು ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್ ಎಂ. ಎಂಬವರು ನಗರ ಠಾಣೆಗೆ ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ಕಿರಣ್ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ.
ತಮ್ಮ ಮಾಲಕತ್ವದ ಲಾರಿಗೆ ಅಸಾಸುದ್ದೀನ್ ಫೈರೋಝ್ ನನ್ನು ಚಾಲಕನಾಗಿ ನೇಮಿಸಿದ್ದು, ಮಾ.29ರಂದು ಸರಕು ಸಾಗಾಟದ ಉದ್ದೇಶಕ್ಕಾಗಿ ಲಾರಿಯನ್ನು ಪಡೆದ ಆತ ಬಳಿಕ ಲಾರಿಯನ್ನಾಗಲೀ, ಬಾಡಿಗೆ ಹಣವನ್ನಾಗಲೀ ಹಿಂದಿರುಗಿಸಿಲ್ಲ. ಈ ಬಗ್ಗೆ, ತಾನು ವಿಚಾರಿಸಿದಾಗ, ಲಾರಿ ಕೆಟ್ಟು ಹೋಗಿದೆ. ರಿಪೇರಿ ಮಾಡಿಸುತ್ತಿದ್ದೇನೆ’ ಎಂದು ಸುಳ್ಳು ಹೇಳಿದ್ದು, ದಿನಗಳು ಕಳೆದರೂ ಲಾರಿ ಹಿಂತಿರುಗಿಸದ ಕಾರಣ ಅನುಮಾನಗೊಂಡು ಮತ್ತೆ ಪ್ರಶ್ನಿಸಿದಾಗ, ಲಾರಿಯನ್ನು ಮಂಗಳೂರಿನ ನೀರುಮಾರ್ಗದಲ್ಲಿರುವ ಕಿರಣ್ ಎಂಬಾತನಿಗೆ ಅಡವಿಟ್ಟಿರುವುದಾಗಿ ಉತ್ತರಿಸಿದ್ದಾನೆ. ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ಚಾಲಕನ ಮಾಹಿತಿ ಮೇರೆಗೆ, ಫರ್ವೀನ್ ಅವರು ವಾಹನಕ್ಕೆ ಸಾಲ ನೀಡಿದ ಹಣಕಾಸು ಸಂಸ್ಥೆಯವರೊಂದಿಗೆ ಎ.3 ರಂದು ನೀರುಮಾರ್ಗದ ಕಿರಣ್ ನನ್ನು ಭೇಟಿಯಾಗಿ ವಿಚಾರಿಸಿದ್ದಾರೆ, ಈ ವೇಳೆ, “ಲಾರಿ ನನ್ನ ಬಳಿಯೇ ಇದೆ. ಇದರ ಸಲುವಾಗಿ ಇಲ್ಲಿಗೆ ಬಂದರೆ ನೀವು ಜೀವಸಹಿತ ವಾಪಸ್ ಹೋಗುವುದಿಲ್ಲ. ಮರ್ಯಾದೆಯಿಂದ ಹೋಗಿ” ಎಂದು ಕಿರಣ್ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.