ಪುತ್ತೂರು: ಕರ್ನಾಟಕ ಕಾಂಗ್ರೇಸ್ ಸರ್ಕಾರ ಕೆಲವೊಂದು ನಿಯಮಗಳನ್ನು ತಂದು ದಕ್ಷಿಣಕನ್ನಡ ಉಡುಪಿಯಲ್ಲಿ ಕೆಂಪು ಕಲ್ಲು ಸಾಗಾಟ ನಿಂತುಹೋಗಿದೆ. ಈಗಾಗಲೇ ಭಾರಿ ಮಳೆಯಿಂದ ಹಲವು ಕಡೆಗಳಲ್ಲಿ ಭೂಕುಸಿತವಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಹಲವಾರು ಕುಟುಂಬಗಳು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದು, ತಮ್ಮ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಕೆಂಪುಕಲ್ಲು, ಮರಳು ಮುಂತಾದವುಗಳು ಮೇಲೆ ಸರ್ಕಾರದ ಕೆಂಗಣ್ಣಿನಿಂದಾಗಿ ಬಡ ಕಾರ್ಮಿಕರ ಮೇಲೆ ಬರೆ ಎಳೆದಂತಾಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾದ ಮನೆಗಳ ದುರಸ್ಥಿಗೂ ಪರದಾಡುವ ಪರಿಸ್ಥಿತಿ ಕಾಂಗ್ರೇಸ್ ಸರ್ಕಾರದ ನೀತಿಯಿಂದಾಗಿ ನಿರ್ಮಾಣವಾಗಿದೆ. ಇದರಿಂದ ಸುಮಾರು ಬಡ ಕಟ್ಟಡ ಕಾರ್ಮಿಕರಿಗೆ ಕೆಲಸವು ಇಲ್ಲದೆ ದಿನದ ಖರ್ಚು, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಖರ್ಚು ಮುಂತಾದವುಗಳನ್ನು ನಿಭಾಯಿಸಲು ಪರದಾಡುವಂತಾಗಿದೆ. ಶೀಘ್ರ ಕೆಂಪು ಕಲ್ಲು ಹಾಗೂ ಹೊಯಿಗೆಗಳಿಗೆ ನೀಡುವ ಪರವಾನಿಗೆಯನ್ನು ಸಡಿಲಗೊಳಿಸಬೇಕು ಹಾಗೂ ಸರಕಾರವು ವಿಧಿಸಿರುವ ಕಠಿಣ ನಿಯಮಗಳನ್ನು ಸಡಿಲಗೊಳಿಸಬೇಕು.
ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.