ಹತ್ತು ಸಾವಿರಕ್ಕೂ ಅಧಿಕ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಸವಾಲು
ನವದೆಹಲಿ: ಭಾರತೀಯರೆಲ್ಲರೂ ಕೂಡಲೇ ಟೆಹ್ರಾನ್ ನಗರದಿಂದ ಹೊರಬೇಕೆಂದು ಭಾರತ ಸರ್ಕಾರ ಟೆಹ್ರಾನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಂಗಳವಾರ ತುರ್ತು ಸೂಚನೆ ನೀಡಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೆಹ್ರಾನ್ ನಗರದಿಂದ ದೂರ ಹೋಗುವಂತೆ ಭಾರತೀಯರಿಗೆ ಸೂಚಿಸಿದೆ.
ಇಸ್ರೇಲ್ ಸತತವಾಗಿ ಟೆಹ್ರಾನ್ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಅಲ್ಲಿ ಇರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜೊತೆಗೆ ಅಮೆರಿಕ ಕೂಡ ಟೆಹ್ರಾನ್ ಬಿಟ್ಟು ಹೋಗುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಘನಘೋರ ಸಮರ ನಡೆಯುವ ಮುನ್ಸೂಚನೆ ಎಂದು ಭಾವಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಟೆಹ್ರಾನ್ನಲ್ಲಿರುವ ಭಾರತೀಯ ದೂತವಾಸ ಭಾರತದ ಪ್ರಜೆಗಳಿಗೆ ನಿಮ್ಮಲ್ಲಿ ವ್ಯವಸ್ಥೆ ಇದ್ದರೆ ಕೂಡಲೇ ನಗರ ತೊರೆದು ದೂರ ಹೋಗಿ ಎಂದು ಹೇಳಿದೆ. ಟೆಹ್ರಾನ್ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳಿಗೆ ಮತ್ತು ಭಾರತೀಯ ಮೂಲದವರಿಗೆ ಅವರ ಬಳಿ ವಾಹನ ಅಥವಾ ಬೇರೆ ಯಾವುದೇ ವ್ಯವಸ್ಥೆ ಇದ್ದರೆ ಕೂಡಲೇ ನಗರ ಬಿಟ್ಟುಹೋಗಲು ಸೂಚಿಸಲಾಗಿದೆ. ಅದೇ ರೀತಿ ಇರಾನ್ನಲ್ಲಿರುವ ಕುರಿತು ಇನ್ನೂ ಮಾಹಿತಿ ನೀಡದ ಭಾರತದವರು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬೇಖೆಂದು ಭಾರತೀಯ ದೂತವಾಸ ಹೇಳಿದೆ. ಇಂಥವರಿಗಾಗಿ +98 9010144557, +98 9128109115, and +98 9128109109 ಸಹಾಯವಾಣಿ ನಂಬರ್ಗಳನ್ನು ಹಂಚಿಕೊಳ್ಳಲಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ಐದನೇ ದಿನವೂ ಮುಂದುವರಿದಿದ್ದು, ಎರಡೂ ದೇಶಗಳ ಪರಸ್ಪರರ ವಿರುದ್ಧ ಕ್ಷಿಪಣಿ ಮತ್ತು ಡ್ರೋನ್ಗಳ ಮಳೆಗರೆಯುತ್ತಿವೆ. ಈ ನಡುವೆ ಅಮೆರಿಕ ಕೂಡ ಸಮರಾಂಗಣಕ್ಕೆ ಧುಮುಕುವ ಸುಳಿವು ನೀಡಿದೆ. ಐದು ದಿನಗಳ ಸಮರದಲ್ಲಿ ಎರಡೂ ದೇಶಗಳಲ್ಲಿ ಅಪಾರ ಸಾವುನೋವು ಮತ್ತು ನಾಶನಷ್ಟ ಸಂಭವಿಸಿದೆ. ಅನೇಕ ಬಹುಮಹಡಿ ಕಟ್ಟಗಳು ಹಾನಿಗೀಡಾಗಿವೆ. ಜನರು ಬಂಕರ್, ನೆಲಮಾಳಿಗೆ ಮುಂತಾದೆಡೆಗಳಲ್ಲಿ ಬಚ್ಚಿಟ್ಟುಕೊಂಡು ಪ್ರಾಣ ರಕ್ಷಿಸಿಕೊಳ್ಳುತ್ತಿದ್ದಾರೆ.
ಇರಾನ್ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳಿದ್ದು, ಅವರನ್ನು ರಕ್ಷಿಸುವುದು ಈಗ ಸವಾಲಾಗಿ ಪರಿಣಮಿಸಿದೆ. ಇರಾನ್ ತನ್ನ ವಾಯುಮಾರ್ಗವನ್ನು ಮುಚ್ಚಿರುವುದರಿಂದ ಅಲ್ಲಿಗೆ ವಿಮಾನ ಒಯ್ಯುವುದು ಅಸಾಧ್ಯ. ಗಡಿ ಭಾಗದ ದೇಶಕ್ಕೆ ಕರೆತಂದು ಅಲ್ಲಿಂದ ವಿಮಾನ ಅಥವಾ ಹಡಗಿನಲ್ಲಿ ಕರೆತರಬೇಕಾಗುತ್ತದೆ. ಸೋಮವಾರ ರಾತ್ರಿ 110 ಭಾರತೀಯ ಪ್ರಜೆಗಳು ಅರ್ಮೇನಿಯ ಗಡಿದಾಟಿ ಬಂದಿದ್ದು, ಅವರನ್ನು ಕರೆತರಲು ಭಾರತ ಸಿದ್ಧತೆ ನಡೆಸಿದೆ.