ಪುತ್ತೂರು: ಕಾಂಗ್ರೆಸ್ ಸರಕಾರ ದುರಾಡಳಿತದ ವಿರುದ್ಧ ಕೆಲವು ಅಂಶಗಳನ್ನು ಮುಂದಿಟ್ಟುಕೊಂಡು ಜೂ.23 ರಂದು ಜಿಲ್ಲೆಯ ಎಲ್ಲಾ ಗ್ರಾಪಂ, ನಗರ, ಪಟ್ಟಣ ಪಂಚಾಯಿತಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರಕಾರಕ್ಕೆ 11 ವರ್ಷ ತುಂಬಿದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ತೆರಿಗೆ ರೂಪದಲ್ಲಿ ಜನರನ್ನು ಲೂಟಿ ಮಾಡುತ್ತಿದೆ. ಮಹಿಳೆಯರಿಗೆ ಬಸ್ಸಿನಲ್ಲಿ ನೀಡುವ ಉಚಿತ ಪ್ರಯಾಣ ಶಕ್ತಿ ಯೋಜನೆಯ ನೆಪದಲ್ಲಿ ರಾಜ್ಯದಲ್ಲಿ ಸಾವಿರಾರು ಬಸ್ಸುಗಳನ್ನು ನಿಲ್ಲಿಸಿದ್ದಾರೆ, ವಿದ್ಯುತ್ ಬಿಲ್ ನಲ್ಲಿ ಪಿಂಚಣಿ, ಗ್ರಾಚ್ಯುಟಿ ನೆಪದಲ್ಲಿ ಹೆಚ್ಚುವರಿ ಹಣವನ್ನು ಗ್ರಾಹಕರಿಂದ ಲೂಟಿ ಮಾಡಲು ಮೆಸ್ಕಾಂ ಇಲಾಖೆ ಮೂಲಕ ಸರಕಾರ ಮಾಡುತ್ತಿದೆ, 9/11 ಜಿಲ್ಲೆಯ ಪೆಡಂಭೂತವಾಗಿದ್ದು, ಇದು ಸಿಗದೆ ಮನೆ ಕಟ್ಟಲು ಆಗುತ್ತಿಲ್ಲ. ಸಂಧ್ಯಾ ಸುರಕ್ಷಾ ಯೋಜನೆಯನ್ನು ರದ್ದು ಮಾಡಲು ಹೊರಟಿದೆ ಎಂದು ಆರೋಪಿಸಿದ ಅವರು, ಈ ವಿಚಾರಗಳನ್ನಿಟ್ಟು ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಂದು ಕಾರ್ಯಾಗಾರ ನಡೆಯುತ್ತಿದ್ದು, ಮಹತ್ವದ ಕಾರ್ಯಾಗಾರವಾಗಿದೆ. ರಾಷ್ಟ್ರೀಯ ನಾಯಕರ ಚಿಂತನೆಯ ಕಾರ್ಯಕ್ರಮವನ್ನು ಸಂಘಟನಾತ್ಮಕವಾಗಿ ಅನುಷ್ಠಾನ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಜೂ.21 ರಂದು ಎಲ್ಲಾ ಶಕ್ತಿ ಕೇಂದ್ರಗಳಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದು ಕೇವಲ ಪಕ್ಷದ ಕಾರ್ಯಕ್ರಮವಾಗದೆ ಸಾರ್ವಜನಿರು ಪಾಲ್ಗೊಳ್ಳುವ ರೀತಿಯ ನಡೆಯಬೇಕು. ಯೋಗ ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲೆಯಿಂದ ಇಬ್ಬರನ್ನು ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಸಿ ನೆಡುವ ಕಾರ್ಯಕ್ರಮ ಎಲ್ಲಾ ಬೂತ್ ಮಟ್ಟದಲ್ಲಿ ನಡೆಯಬೇಕು. ಅಲ್ಲದೆ ಜೂ.23 ರಂದು ಶ್ಯಾಮ್ ಪ್ರಸಾದ್ ಮುಖರ್ಜಿ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ಆಯೋಜಿಸಬೇಕಾಗಿದೆ ಎಂದು ತಿಳಿಸಿದರು.
ವಿಕಸಿತ ಪುತ್ತೂರು ಪ್ರಮುಖ ವಿಕಾಸ್ ಪುತ್ತೂರು ವಿಕಸಿತ ಭಾರತ ಸಂಕಲ್ಪ ಕುರಿತು ಮಾತನಾಡಿ, ಪ್ರಸ್ತುತ ಭಾರತ ಆರ್ಥಿಕವಾಗಿ, ರಕ್ಷಣಾತ್ಮಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಆರ್ಥಿಕ ಸದೃಢ ದೇಶ ಇದ್ದರೆ ಅದು ಭಾರತ. ಇದು ಸದೃಢ ನಾಯಕತ್ವದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮೋದಿ ನಾಯಕತ್ವ ಸದೃಢವಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕಳೆದ 50-60 ವರ್ಷಗಳಲ್ಲಿ ಆಗದೇ ಇರುವ ಸಾಧನೆಯನ್ನು ಮೋದಿ ಸರಕಾರ ಮಾಡಿರುವುದು ದೇಶಕ್ಕೆ ಹೆಮ್ಮೆ ತರುವ ಕೆಲಸ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿ.ನಾರಾಯಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲ ಕಾರ್ಯದರ್ಶಿ ಸುನಿಲ್ ಆಳ್ವ, ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಹರೀಶ್ ಕಂಜಿಪಿಲಿ, ನಿತೇಶ್ ಶಾಂತಿವನ, ಮಂಡಲ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ ಉಪಸ್ಥಿತರಿದ್ದರು.
ಸಭೆಯಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತ ಬಾಲಕೃಷ್ಣ ಮುಗೆರೋಡಿ, ಪ್ರಮುಖರಾದ ಅಪ್ಪಯ್ಯ ಮಣಿಯಾಣಿ, ಲೋಕೇಶ್ ಹೆಗ್ಡೆ, ಅರುಣ್ ಕುಮಾರ್ ಪುತ್ತಿಲ, ರಾಜೇಶ್ ಬನ್ನೂರು, ಸಾಜ ರಾಧಾಕೃಷ್ಣ ಆಳ್ವ, ಚಂದ್ರಶೇಖರ ಬಪ್ಪಳಿಗೆ, ಪುರುಷೋತ್ತಮ ಮುಂಗ್ಲಿಮನೆ, ಮತ್ತಿತರರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಯುವರಾಜ ಪೆರಿಯತ್ತೋಡಿ ಸ್ವಾಗತಿಸಿದರು. ಕುಮಾರ ನರಸಿಂಹ ಭಟ್, ಸುನಿಲ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.