ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿವತಿಯಿಂದ ನವೆಂಬರ್ ತಿಂಗಳಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು 100 ಮಂದಿ ಜೋಡಿಯ ಸಾಮೂಹಿಕ ವಿವಾಹದ ಕಾರ್ಯಾಲಯವನ್ನು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಹಿಂದವಿ ಕಚೇರಿಯಲ್ಲಿ ಶನಿವಾರ ಉದ್ಘಾಟಿಸಲಾಯಿತು.
ಪೂಂಜಾಲಕಟ್ಟೆ ಸ್ವಸ್ತಿಕ್ ಕ್ಲಬ್ನ ಸ್ಥಾಪಕ ಅಧ್ಯಕ್ಷ, ಹಲವಾರು ಸಾಮೂಹಿಕ ವಿವಾಹ ನಡೆಸುತ್ತಿರುವ ತುಂಗಪ್ಪ ಬಂಗೇರ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಕಾರ್ಯಕ್ರಮವಾಗಿ ಸಾಮೂಹಿಕ ವಿವಾಹ ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಹಣ ಮುಖ್ಯವಲ್ಲ. ಕಾರ್ಯಕರ್ತರ ಶ್ರಮ ಮುಖ್ಯ. ನಾನು ನಿಮ್ಮ ಕಾರ್ಯಗಳಿಗೆ ಪ್ರಯತ್ನ ಪಡುತ್ತೇನೆ. ಸಾಮೂಹಿಕ ವಿವಾಹ ಮಾಡುವುದು ದೇವರು ಮೆಚ್ಚುವ ಕೆಲಸ ದುಬಾರಿ ವೆಚ್ಚದಲ್ಲಿ ಮದುವೆಯಾಗುವುದನ್ನು ನಿಲ್ಲಿಸಿ ಅವರಿಗೆ ಮನವೊಲಿಸಿ ಸಾಮೂಹಿಕ ವಿವಾಹಕ್ಕೆ ಕರೆಸುವ ಕೆಲಸ ಆಗಬೇಕು. ಸಾಮೂಹಿಕ ವಿವಾಹದ ಸೌಂದರ್ಯವೇ ವಿಶೇಷ. ಹಾಗಾಗಿ ಪರಿವಾರದ ಕಾರ್ಯಕರ್ತರೆಲ್ಲರೂ ಒಂದೊಂದು ಜೋಡಿಯನ್ನು ತಂದರೆ ನೂರು ಜೋಡಿ ಆಗುವುದು ದೊಡ್ಡ ಸಂಗತಿಯೇ ಅಲ್ಲ ಎಂದರು.
ನವೀಕರಣಗೊಂಡ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಹಿಂದವಿ’ ಕಚೇರಿಯನ್ನು ಉದ್ಘಾಟಿಸಿದ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ ಮಾತನಾಡಿ, ಮಾನಸಿಕ ಕತ್ತಲೆಯನ್ನು ಹೋಗಲಾಡಿಸಿ ಸಂಘಟನೆಯನ್ನು ಮುಂದೆ ಬೆಳಕಿನೆಡೆಗೆ ತರುವ ಪ್ರಯತ್ನ ಅರುಣ್ ಕುಮಾರ್ ಪುತ್ತಿಲ ಅವರು ನಿರಂತರ ಮಾಡುತ್ತಾ ಬಂದಿದ್ದಾರೆ.
ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಶಿವಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಹಿಂದುತ್ವಕ್ಕೆ ದುಡಿಯವವರೊಂದಿಗೆ ನಾನಿದ್ದೇನೆ. ನನಗೆ ರಾಜಕೀಯವಿಲ್ಲ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನಿಂದಾಗುವ ಕಾರ್ಯಕ್ರಮಕ್ಕೆ ನಾವೆಲ್ಲ ಸಹಕಾರ ಕೋಡಬೇಕೆಂದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದು ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ಸ್ವಾಭಿಮಾನದಲ್ಲಿ ತಲೆ ಎತ್ತಿ ಬದುಕಬೇಕೆಂಬ ಯೋಚನೆ ಅಡಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಪರಿವಾರ ಸೇವಾ ಟ್ರಸ್ಟ್ನ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದೇವೆ. ಸುಮಾರು ರೂ. 43.80 ಲಕ್ಷ ಬೇರೆ ಬೇರೆ ಸಮಾಜದ ಕೆಲಸ ಕಾರ್ಯಕ್ಕೆ ವಿನಿಯೋಗ ಮಾಡಿದ್ದೇವೆ. ಅಶಕ್ತರಿಗೆ ಮನೆ ನಿರ್ಮಾಣ, ವಿದ್ಯಾಭ್ಯಾಸ ವಂಚಿತರಿಗೆ ಮಕ್ಕಳಿಗೆ ಶಿಕ್ಷಣ ಕೊಡುವ ವ್ಯವಸ್ಥೆ. ಸಮಾಜದ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಮಾಡುವ ಧಾರ್ಮಿಕ ಕಾರ್ಯಕ್ರಮಗಳಿಗೆ, ಉಚಿತ ವೈದ್ಯಕೀಯ ಸೇವೆ ಮಾಡುವ ಮೂಲಕ ಹಿಂದು ಸಮಾಜದೊಂದಿಗೆ ನಾವೆಲ್ಲ ಇದ್ದೇವೆ. ಅವರ ನೋವು ನಮ್ಮ ನೋವು ಎಂಬ ಯೋಚನೆಯ ಅಡಿಯಲ್ಲಿ ಕೆಲಸ ಕಾರ್ಯ ಮಾಡಿದ್ದೇವೆ. ಹಿಂದು ಸಮಾಜದ ಮೇಲೆ ಯಾವುದೇ ಸವಾಲು ಇದ್ದರೂ ಕೂಡಾ ಈ ಕಚೇರಿಯ ಮೂಲಕ ಸ್ವೀಕಾರ ಮಾಡಿ ಸಮಾಜಕ್ಕೆ ಶಕ್ತಿ ಕಾರ್ಯ ಕೆಲಸ ಮಾಡುತ್ತೇವೆ ಎಂದ ಅವರು ಪೆಜಾವರ ಶ್ರೀಗಳ ಆಶಯದಂತೆ ಗೋ ಶಾಲೆಗಾಗಿ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಸರಕಾರ ಗೋ ಶಾಲೆಗೆ ನಾವು ಗುರುತಿಸಿದ ಜಾಗ ನೀಡುವುದಾದರೆ ಮುಂದಿನ ಶ್ರೀನಿವಾಸ ಕಲ್ಯಾಣೋತ್ಸವದ ಒಳಗೆ ಗೋ ಶಾಲೆಯನ್ನು ಕೂಡಾ ಲೋಕರ್ಪಾಣೆ ಮಾಡಲು ನಾವು ಸಿದ್ದರಿದ್ದೇವೆ ಎಂದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಾಜಾರಾಮ ಶೆಟ್ಟಿ, ನ್ಯಾಯವಾದಿ ನರಸಿಂಹ ಪ್ರಸಾದ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಿರಿಯರಾದ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವಿಶ್ವಹಿಂದು ಪರಿಷತ್ನ ನೂತನ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆಯನ್ನು ಅರುಣ್ ಕುಮಾರ್ ಪುತ್ತಿಲ ಮತ್ತು ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಅವರು ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅವರಿಗೆ ಹಸ್ತಾಂತರಿಸಿದರು. ಕಟ್ಟಡದ ಮಾಲಕಿ ರಜಾತ ಗಿರೀಶ್ ಭಟ್, ಸಚಿನ್ ಟ್ರೇಡಿಂಗ್ ಮಾಲಕ ಮಂಜುನಾಥ ನಾಯಕ್, ಕೋಶಾಧಿಕಾರಿ ಗಣೇಶ್ ಭಟ್ ಮಕರಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿ ರೈ ಮಠ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಪ್ರಸನ್ನ ಮಾರ್ತ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್, ನಗರ ಮಂಡಲದ ಪ್ರಧಾನ ಅನಿಲ್ ತೆಂಕಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಈಶ್ವರ ಭಟ್, ಸುಬ್ರಹ್ಮಣ್ಯ, ರಘು ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.