ಡೆಹ್ರಾಡೂನ್: : ಅಹಮದಾಬಾದ್ ವಿಮಾನ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದ್ದು, ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಗೌರಿಕುಂಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿ ಹೆಲಿಕಾಪ್ಟರ್ನಲ್ಲಿದ್ದ ಪೈಲಟರ್ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಎನ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ತಲುಪಿವೆ. ಹೆಲಿಕಾಪ್ಟರ್ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ. ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯರು ಹೊಗೆಯನ್ನು ನೋಡಿದ ನಂತರ ಘಟನೆಯ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ ಆರ್ಯನ್ ಏವಿಯೇಷನ್ ಕಂಪನಿಗೆ ಸೇರಿದ್ದು, ಇಂದು ಬೆಳಗ್ಗೆ ಡೆಹ್ರಾಡೂನ್ನಿಂದ ಕೇದಾರನಾಥಕ್ಕೆ ಹೋಗುತ್ತಿದ್ದಾಗ ತ್ರಿಜುಗಿನಾರಾಯಣ ಮತ್ತು ಗೌರಿಕುಂಡ್ ನಡುವೆ ನಾಪತ್ತೆಯಾಗಿ ಬಳಿಕ ಪತನಗೊಂಡಿದೆ.
ಕಳೆದ ಒಂದು ತಿಂಗಳಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಮೂರನೇ ಹೆಲಿಕಾಪ್ಟರ್ ಅಪಘಾತ ಇದಾಗಿದೆ. ಮೃತಪಟ್ಟವರಲ್ಲಿ 23 ತಿಂಗಳ ಮಗು ಕೂಡ ಇತ್ತು ಎಂದು ತಿಳಿದುಬಂದಿದೆ. ಬೆಳಿಗ್ಗೆ 5.30ಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರತಿಕೂಲ ಹವಾಮಾನವೇ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಹೆಲಿಕಾಪ್ಟರ್ ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಹೆಲಿಕಾಪ್ಟರ್ ಅಪಘಾತವನ್ನು ದೃಢಪಡಿಸಿದ್ದಾರೆ. ಗೌರಿಕುಂಡ್ ಮೇಲೆ ಹುಲ್ಲು ಕಡಿಯುತ್ತಿದ್ದ ನೇಪಾಳಿ ಮೂಲದ ಮಹಿಳೆಯರು ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೃತರೆಲ್ಲರೂ ಮಹಾರಾಷ್ಟ್ರದ ಜೈಸ್ವಾಲ್ ಕುಟುಂಬಕ್ಕೆ ಸೇರಿದವರು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಕುಮಾರ್ ಜೈಸ್ವಾಲ್, ಶ್ರದ್ಧಾ ಜೈಸ್ವಾಲ್, ಕಾಶಿ ಜೈಸ್ವಾಲ್, ತುಸ್ತಿ ಸಿಂಗ್, ವಿನೋದ್, ವಿಕ್ರಮ್ ಸಿಂಗ್ ಮತ್ತು ಕ್ಯಾಪ್ಟನ್ ರಾಜೀವ್ ಮೃತರು. ಮೃತದೇಹಗಳು ತೀವ್ರವಾಗಿ ಸುಟ್ಟುಹೋಗಿವೆ. ಗೌರಿ ಮೈಖಾರ್ಕ್ ಮೇಲಿನ ಕಾಡಿನಲ್ಲಿ ಹೆಲಿಕಾಪ್ಟರ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.