ಮಧ್ಯರಾತ್ರಿ ಹಟ್ಟಿಯಲ್ಲಿದ್ದ ಹಸುವಿಗೆ ಹಿಂಸೆ
ಬೆಂಗಳೂರು: ಬೆಂಗಳೂರು ಬಳಿಕ ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಕುಳಗೇರಿ ಕ್ರಾಸ್ ಬಳಿ ಮನೆಯ ಹಟ್ಟಿಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ದುರುಳರು ವಿಕೃತಿ ಮೆರೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬವರು ಸಾಕಿರುವ ಹಸುವಿನ ಕೆಚ್ಚಲನ್ನು ದುರುಳರು ಶುಕ್ರವಾರ ಕತ್ತರಿಸಿದ್ದಾರೆ.
ಮಧ್ಯರಾತ್ರಿ ಹಸುವಿಗೆ ಮೇವು ಹಾಕಿ ಮನೆಯವರು ತೆರಳಿದ್ದಾರೆ. ಬಳಿಕ ಈ ಕೃತ್ಯ ಎಸಗಿದ್ದಾರೆ. ಹಸುವಿನ ಕೆಚ್ಚಲಿನಿಂದ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿ ಮನೆಯವರು ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ವೈದ್ಯರು ಹಸುವಿಗೆ ಚಿಕಿತ್ಸೆ ನೀಡಿದ್ದು, ಆರೋಗ್ಯ ಸುಧಾರಿಸಿದೆ. ಕುಳಗೇರಿ ಉಪಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಒಬ್ಬರಿಂದ ಇಂತಹ ಕೃತ್ಯ ಮಾಡಲು ಸಾಧ್ಯವಿಲ್ಲ. ನಾಲ್ಕೈದು ಜನ ಸೇರಿ ಕೃತ್ಯ ನಡೆಸಿರಬಹುದು. ಮೂಕಪ್ರಾಣಿಗಳಿಗೆ ಹೀಗೆ ನೋವು ನೀಡುವುದು ಯಾವ ನ್ಯಾಯ? ಎಂದು ಭರಮಪ್ಪ ಕುರಿ ಪ್ರಶ್ನಿಸಿದ್ದಾರೆ. ಗ್ರಾಮದ ಜನರು ಹಸುವಿನ ಸ್ಥಿತಿಗೆ ಮರುಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇದೇ ಮಾದರಿ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಸಂಭವಿಸಿದ್ದು, ರಾಷ್ಟ್ರಮಟ್ಟದಲ್ಲಿ ಇದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.