ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ
ಅಹಮದಾಬಾದ್: ಇಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 274ಕ್ಕೇರಿದೆ. ವಿಮಾನದಲ್ಲಿದ್ದ 230 ಪ್ರಯಾಣಿಕರು, 10 ಗಗನಸಖಿಯರು ಮತ್ತು ಇಬ್ಬರು ಪೈಲಟ್ಗಳ ಪೈಕಿ ಬದುಕುಳಿದಿರುವುದು ಒಬ್ಬ ಪ್ರಯಾಣಿಕ ಮಾತ್ರ. ವಿಮಾನ ಅಹಮದಾಬಾದ್ನ ಮೇಘನಿ ನಗರದಲ್ಲಿರುವ ಬಿ.ಜೆ.ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ಅಪ್ಪಳಿಸಿದ ಪರಿಣಾಮ ಇನ್ನಷ್ಟು ಸಾವುಗಳು ಸಂಭವಿಸಿವೆ. ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್ ಹಾಗೂ ಸಿಬ್ಬಂದಿ, ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಜನರು ಸೇರಿದ್ದಾರೆ.
ಮೇಘನಿ ನಗರದಲ್ಲಿ ಮೆಡಿಕಲ್ ಕಾಲೇಜಿನ ಕ್ವಾರ್ಟರ್ಸ್ಗಳಲ್ಲಿ ವಾಸವಾಗಿದ್ದ ವೈದ್ಯರು ಮತ್ತು ಅವರ ಬಂಧುಗಳು ಸೇರಿ 10 ಮಂದಿ ಸಾವಿಗೀಡಾಗಿದ್ದಾರೆ. ಹಾಸ್ಟೆನಲ್ಲಿದ್ದ 24 ಮೆಡಿಕಲ್ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಈ ಪೈಕಿ ಕೆಲವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗುರುವಾರ ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು.
ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನದಲ್ಲಿದ್ದ ಎರಡು ಬ್ಲ್ಯಾಕ್ಬಾಕ್ಸ್ಗಳ ಪೈಕಿ ಒಂದು ಪತ್ತೆಯಾಗಿದೆ. ಅದನ್ನು ಅಧಿಕಾರಿಗಳ ತಂಡ ಕೊಂಡೊಯ್ದಿದೆ. ಮತ್ತೊಂದು ಬ್ಲ್ಯಾಕ್ಬಾಕ್ಸ್ಗಾಗಿ ಹುಡುಕಾಟ ನಡೆದಿದೆ. 100ಕ್ಕೂ ಅಧಿಕ ಕಾರ್ಮಿಕರು ಮತ್ತು 40ಕ್ಕೂ ಅಧಿಕ ಇಂಜಿನಿಯರ್ಗಳು ವಿಮಾನದ ಅವಶೇಷ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಲವು ಉನ್ನತ ಅಧಿಕಾರಿಗಳು ಇನ್ನೂ ಸ್ಥಳದಲ್ಲಿದ್ದಾರೆ.
ವಿಮಾನ ಅವಘಡದ ತನಿಖೆಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಈ ಸಮಿತಿ ಇಂದು ದುರಂತ ಸಂಬವಿಸಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ.