ಉಳ್ಳಾಲ: ವಿದ್ಯಾರ್ಥಿನಿಯೋರ್ವಳು ವಸತಿ ಕಟ್ಟಡದ 12ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಕುತ್ತಾರುನಲ್ಲಿ ನಡೆದಿದೆ.
ಹಿಬಾ ಐಮನ್ (15) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ರಾಜ್ ಅಹಮ್ಮದ್ ಮತ್ತು ಖಮ್ರಾಜ್ ಬಾನು ಅವರ ಹಿರಿಯ ಪುತ್ರಿಯಾಗಿರುವ ಹಿಬಾ ಐಮನ್ 18 ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12ನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದರು. ನಿನ್ನೆ ರಾತ್ರಿ ದಂಪತಿ ರಾತ್ರಿ ಪಾಳಿ ಕರ್ತವ್ಯಕ್ಕೆ ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ಹಿಬಾ ಮತ್ತು ಆಕೆಯ ಕಿರಿಯ ಸಹೋದರ ಮಾತ್ರ ಇದ್ದರು. ಹಿಬಾ ರಾತ್ರಿ ವೇಳೆ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕಲೆಂದು ಸ್ಕೂಲ್ ಮೇಲೆ ನಿಂತಾಗ ಆಯತಪ್ಪಿ ವಸತಿ ಸಂಕೀರ್ಣದ ಕಟ್ಟಡದಿಂದ ಕೆಳಗಡೆ ಬಿದ್ದು ಮೃತ ಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮೃತ ಹಿಬಾ ಮಂಗಳೂರಿನ ಯೆನಪೋಯ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.