ಅಶ್ರಫ್‌, ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಗಳ ಎನ್‌ಐಎ ತನಿಖೆ?

ಎನ್‌ಐಎಗೊಪ್ಪಿಸುವ ಕುರಿತು ಸ್ಪೀಕರ್‌ ಯು.ಟಿ.ಖಾದರ್‌ ಮಾತುಕತೆ

ಮಂಗಳೂರು : ಮಂಗಳೂರು ಸಮೀಪ ಕುಡುಪುವಿನಲ್ಲಿ ನಡೆದ ಕೇರಳ ವಯನಾಡು ಮೂಲದ ಅಶ್ರಫ್ ಗುಂಪು ಹತ್ಯೆ ಹಾಗೂ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್‌ ಹತ್ಯೆ ಪ್ರಕರಣಗಳ ತನಿಖೆಯನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯನ್ನು ಎನ್‌ಐಎ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಿಸಿದ ಬಳಿಕ ಅಶ್ರಫ್‌ ಮತ್ತು ಅಬ್ದುಲ್‌ ರಹಿಮಾನ್‌ ತನಿಖೆಯನ್ನೂ ಎನ್‌ಐಎ ಮಾಡಲಿ ಎಂಬ ಒತ್ತಾಯ ಕೇಳಿ ಬಂದಿತ್ತು. ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಸಂಘಟನೆಗಳ ಮುಖಂಡರೇ ಸುದ್ದಿಗೋಷ್ಠಿ ಕರೆದು ಈ ಎರಡು ತನಿಖೆಗಳನ್ನೂ ಎನ್‌ಐಎಗೊಪ್ಪಿಸಬೇಕೆಂದು ಬೇಡಿಕೆ ಇಟ್ಟಿದ್ದರು. ತನಿಖೆಯಲ್ಲಿ ತಾರತಮ್ಯ ಮಾಡಬಾರದು. ಎಲ್ಲ ಹತ್ಯೆಗಳ ತನಿಖೆಯನ್ನೂ ಎನ್‌ಐಎ ಮಾಡಲಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.



















































 
 

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಮಾಡಬೇಕೆಂದು ಹಿಂದೂ ಮುಖಂಡರು ಪ್ರಾರಂಭದಿಂದಲೇ ಒತ್ತಾಯ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಮತ್ತು ಮುಸ್ಲಿಮ್‌ ಮತ್ತು ಕಾಂಗ್ರೆಸ್‌ ಮುಖಂಡರು ವಿರೋಧಿಸಿದ್ದರು. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಐಎಗೆ ಆದೇಶಿಸಲಾಗಿತ್ತು.

ಸ್ಪೀಕರ್ ಯು.ಟಿ ಖಾದರ್ ಹಜ್ ಮುಗಿಸಿ ಮಂಗಳೂರಿಗೆ ಮರಳಿದ ಬಳಿಕ ಮಂಗಳೂರು ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ ಹಾಗೂ ಕೋಮು ಹಿಂಸಾಚಾರಕ್ಕೆ ಕಡಿವಾಣ ಹಾಕಲು ಏನೇನು ಕ್ರಮ ಕೈಗೊಳ್ಳಬೇಕು ಎಂದೂ ಚರ್ಚೆ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರ ನಡುವೆಯೂ ವಿವರವಾದ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದೀಗ ಅಶ್ರಫ್ ಗುಂಪು ಹತ್ಯೆ ಹಾಗೂ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಗಳನ್ನೂ ಎನ್‌ಐಎಗೆ ವಹಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಕೋಮು ಆಧಾರದಲ್ಲಿ ಹಾಗೂ ಸೇಡಿನ ಭಾವನೆಯ ಭಾವನೆಯಲ್ಲಿ ಈ ಎರಡೂ ಕೊಲೆಗಳು ನಡೆದಿರುವ ಹಿನ್ನೆಲೆಯಲ್ಲಿ ಇವುಗಳ ಹಿಂದಿರುವ ಶಕ್ತಿಗಳು ಹಾಗೂ ಕಾರಣಗಳ ಬಗ್ಗೆ ಸಮಗ್ರ ತನಿಖೆ ನಡೆಯುವುದು ಉತ್ತಮ, ಅದಕ್ಕೆ ಎನ್‌ಐಎ ತನಿಖೆಯೇ ಸೂಕ್ತ ಎಂಬ ಸೂಕ್ತ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ , ಈ ಬಗ್ಗೆ ಶೀಘ್ರ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top