ಬೆಂದು ಹೋದ ಜೀವಗಳು – ಕರಟಿ ಹೋದ ಕನಸುಗಳು…

ವಿಮಾನ ದುರಂತದ ಮನಕಲಕುವ ಕಥೆಗಳು

ಅಹದಾಬಾದ್‌: ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಕರಟಿ ಹೋದ ಕನಸುಗಳೆಷ್ಟೋ, ಬೆಂದು ಹೋದ ಬದುಕುಗಳೆಷ್ಟೋ? ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದವರು ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಗುರುತು ಕೂಡ ಸಿಗದಷ್ಟು ಭೀಕರವಾಗಿ ಸಾಯಬಹುದು ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ. ಮನೆ ಕಟ್ಟಲು ತೊಡಗಿದ್ದ ನರ್ಸ್‌, ಸುಖಸಾಗರದಲ್ಲಿ ತೇಲಾಡುತ್ತಿದ್ದ ಸುಂದರ ಕುಟುಂಬ, ಹೆಂಡತಿಯನ್ನು ಕರೆತರಲು ಹೋಗುತ್ತಿದ್ದ ಮಾಜಿ ಮುಖ್ಯಮಂತ್ರಿ… ಹೀಗೆ ಒಂದೊಂದೇ ದುರಂತ ಕಥೆಗಳು ಹೊರಬರುತ್ತಿವೆ. ವಿಮಾನದಲ್ಲಿದ್ದ ಎಲ್ಲ 242 ಜನರೂ ಹೀಗೆ ಕನಸುಗಳ, ಬದುಕಿನ ಮೂಟೆಗಳನ್ನು ಹೊತ್ತುಕೊಂಡವರೇ ಆಗಿದ್ದರು. ಎಲ್ಲರಿಗೂ ಅವರದ್ದೇ ಆದ ಪುಟ್ಟ ಪ್ರಪಂಚವಿತ್ತು. ಅವೆಲ್ಲವೂ ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗಿ ಹೀಗಿವೆ. ಅವರ ಕಥೆಗಳನ್ನು ಕೇಳುವಾಗ ಹೃದಯ ಕಲಕುತ್ತದೆ, ಕರುಳು ಹಿಂಡಿದಂತಾಗುತ್ತದೆ.

ರಂಜಿತಾ ಹೊಸಮನೆಗೆ ಪ್ರವೇಶಿಸಲೇ ಇಲ್ಲ



















































 
 

ಲಂಡನ್‌ನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ರಂಜಿತಾ ಗೋಪಕುಮಾರನ್‌ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ರಂಜಿತಾ ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಲಂಡನ್‌ನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆ ಮೇಲೆ ಕೇರಳಕ್ಕೆ ಬಂದು ರಜೆ ಮುಗಿಸಿ ವಾಪಸ್‌ ಆಗುವಾಗ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕನಸಿನ ಮನೆಗೆ ಕಾಲಿಡುವ ಮೊದಲೇ ನರ್ಸ್‌ ರಂಜಿತಾ ಸಾವಿನ ಮನೆ ಸೇರಿದ್ದಾರೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಪ್ರೇಮ್ ಕೃಷ್ಣನ್ ಎಸ್. ಹಾಗೂ ರಂಜಿತಾ ಈ ವಿಮಾನದಲ್ಲಿದ್ದರು.

42 ವರ್ಷದ ರಂಜಿತಾ ಪತಿ ವಿನೀಶ್, ಮಕ್ಕಳಾದ ರಿತಿಕಾ ಮತ್ತು ಇಂದುಚೂಡನ್ ಅವರನ್ನು ಅಗಲಿದ್ದಾರೆ. ಯುಕೆಗೆ ತೆರಳುವ ಮೊದಲು, ರಂಜಿತಾ ಎಂಟು ವರ್ಷಗಳ ಕಾಲ ಒಮಾನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು. ಅವರ ಪತಿ ಕೂಡ ಒಮಾನ್‌ನಲ್ಲಿದ್ದರು. ಆದರೆ ನಂತರ ಕೇರಳಕ್ಕೆ ಮರಳಿದರು. ಅದಾದ ಬಳಿಕ ರಂಜಿತಾ ಯುಕೆಗೆ ತೆರಳಿದ್ದರು. ನಿನ್ನೆ ಇಬ್ಬರು ಮಕ್ಕಳನ್ನು ಸ್ಕೂಲ್‌ಗೆ ಕಳುಹಿಸಿ ಲಂಡನ್‌ಗೆ ಹೊರಟ್ಟಿದ್ದರು. ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಈಗಾಗಲೇ ಮನೆಯ ಬಹುತೇಕ ಕೆಲಸ ಪೂರ್ಣಗೊಂಡಿತ್ತು. ಜುಲೈನಲ್ಲಿ ಗೃಹ ಪ್ರವೇಶದ ಪ್ಲ್ಯಾನ್‌ ಮಾಡಿಕೊಂಡಿದ್ದರು. ನಿನ್ನೆ ತನ್ನ ಕನಸುಗಳೊಂದಿಗೆ ರಂಜಿತಾ ಸುಟ್ಟು ಕರಕಲಾಗಿದ್ದಾರೆ.

ಒಂದೇ ಕುಟುಂಬದ ಐವರು ಸಾವು

ಗಂಡ-ಹೆಂಡತಿ ಹಾಗೂ ಮೂರು ಮುದ್ದಾದ ಮಕ್ಕಳು ಒಂದೇ ದಿನ ಮೃತಪಟ್ಟ ಘಟನೆಗೂ ಈ ಅಪಘಾತ ಸಾಕ್ಷಿಯಾಯಿತು. ಸಾಫ್ಟ್‌ವೇರ್‌ ವೃತ್ತಿಯ ಪ್ರತೀಕ್‌ ಜೋಶಿ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದರು. ಮೂವರು ಮಕ್ಕಳು ಹಾಗೂ ಮಡದಿಯೊಂದಿಗೆ ಲಂಡನ್‌ನಲ್ಲಿ ಸುಂದರವಾದ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು.

ಮಕ್ಕಳು, ಮಡದಿಯನ್ನು ಲಂಡನ್‌ಗೆ ಕರೆಸಿಕೊಳ್ಳಲು ಹಲವು ವರ್ಷಗಳಿಂದ ಪ್ರತೀಕ್‌ ಕಾದಿದ್ದರು. ಕನಸು ಅಂತಿಮವಾಗಿ ನನಸಾಯಿತು. ಉದಯಪುರದಲ್ಲಿ ಪ್ರಸಿದ್ಧ ವೈದ್ಯೆಯಾಗಿದ್ದ ಡಾ. ಕೋಮಿ ವ್ಯಾಸ್‌ ಅವರು ಎರಡು ದಿನಗಳ ಹಿಂದಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಪ್ರತೀಕ್ ಜೊತೆ ಲಂಡನ್‌ಗೆ ಹೊರಡಲು ಸಜ್ಜಾಗಿದ್ದರು.

ಗುರುವಾರ ಬೆಳಗ್ಗೆ ಈ ಕುಟುಂಬ ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಭಾರತದಲ್ಲಿ ತಮ್ಮ ಜೀವನದ ಕಡೆಯ ಸೆಲ್ಫಿಯನ್ನು ಕುಟುಂಬ ಕ್ಲಿಕ್ಕಿಸಿಕೊಂಡಿತ್ತು. ಆ ಸೆಲ್ಫಿಯನ್ನು ತನ್ನ ಸಂಬಂಧಿಕರಿಗೆ ಕಳಿಸಿ ಖುಷಿಪಟ್ಟಿತ್ತು. ಅದೇ ತಮ್ಮ ಬದುಕಿನ ಕೊನೆಯ ಸೆಲ್ಫಿ ಎಂದು ಅವರು ಕನಸು ಮನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ. ಭೀಕರ ವಿಮಾನ ಅಪಘಾತದಲ್ಲಿ ಈ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಲಕ್ಕಿ ನಂಬರ್‌ ಅನ್‌ಲಕ್ಕಿ ಆಯಿತೇ?

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ದುರಂತಕ್ಕೆ ಬಲಿಯಾದವರಲ್ಲಿ ಸೇರಿದ್ದಾರೆ. ಅವರು ಪತ್ನಿ ಅಂಜಲಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್​ಗೆ ತೆರಳುತ್ತಿದ್ದರು. ವಿಜಯ್ ರೂಪಾನಿ ಅವರ ಸಾವಿನ ದಿನಾಂಕದ ಬಗ್ಗೆ ಇದೀಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಜೀವನದುದ್ದಕ್ಕೂ ಅದೃಷ್ಟ ಎಂದೇ ಅವರು ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಅವರಿಗೆ ಮುಳುವಾಗಿದೆ. ಅಷ್ಟೇ ಅಲ್ಲ, ಅವರ ಸಾವಿನ ದಿನಾಂಕವಾಗಿ ಮಾರ್ಪಟ್ಟಿದೆ!

ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ. ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅದನ್ನು ಅವರು ಅದೃಷ್ಟವೆಂದೇ ಭಾವಿಸಿದ್ದರು. ವಿಜಯ್ ರೂಪಾನಿ ಈ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಅದೃಷ್ಟವೆಂದು ಪರಿಗಣಿಸಿದ್ದರು ಎಂದರೆ, ತಾವು ಖರೀದಿ ಮಾಡಿದ ಮೊದಲ ಸ್ಕೂಟರ್‌ನಿಂದ ಕಾರಿನವರೆಗೆ ಎಲ್ಲ ವಾಹನಗಳ ಸಂಖ್ಯೆ 1206ರಿಂದಲೇ ಪ್ರಾರಂಭವಾಗುವಂತಿತ್ತು. ಆದರೆ ಅದೇ ಸಂಖ್ಯೆ ಅವರಿಗೆ ಅಶುಭಕರವಾಗಿ ಪರಿಣಮಿಸಿತು. 1206 (ದಿನಾಂಕ 12-6-25) ರಂದು ಅವರು ಪ್ರಾಣವನ್ನೇ ಕಳೆದುಕೊಂಡರು. ಕಳೆದ ಆರು ತಿಂಗಳಿಂದ ಲಂಡನ್‌ನಲ್ಲಿ ಮಗಳ ಜೊತೆಗಿದ್ದ ಹೆಂಡತಿಯನ್ನು ಕರೆತರಲೆಂದು ಹೋಗುತ್ತಿದ್ದ ರೂಪಾನಿ ಪಾಲಿಗೆ ಅದೇ ಬದುಕಿನ ಕಡೆಯ ಪ್ರಯಾಣವಾಗಿ ಹೋಯಿತು.

ಕಲಿಕೆಯ ಕನಸು ಕಮರಿ ಹೋಯಿತು

ಲಂಡನ್‌ನಲ್ಲಿ ತನ್ನ ಇಷ್ಟದ ಕೋರ್ಸ್‌ ಮಾಡಲು ಹೊರಟಿದ್ದ ಪಾಯಲ್ ಖಾಟಿಕ್ ಅವರ ಕನಸು ಕೇವಲ 9 ಗಂಟೆಗಳ ಹಾರಾಟದ ದೂರದಲ್ಲಿತ್ತು. ಆದರೆ ಅವರ ಕನಸು ಮತ್ತು ಅವರ ದೇಹ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸುಟ್ಟು ಬೂದಿಯಾಯಿತು.
ರಾಜಸ್ಥಾನದ ಉದಯಪುರ ಮೂಲದ ಯುವತಿ ಪಾಯಲ್ ಲಂಡನ್‌ಗೆ ತೆರಳಲು ಅಹಮದಾಬಾದ್‌ನಿಂದ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಈ ದುರಂತದಲ್ಲಿ ಅವರು ಸಾವಿಗೀಡಾಗಿದ್ದಾರೆ. ಗುಜರಾತ್‌ನ ಹಿಮ್ಮತ್‌ನಗರದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಪಾಯಲ್, ಲಂಡನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಹೋಗುತ್ತಿದ್ದರು. ಸ್ಥಳೀಯರು, ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಗಂಡನನ್ನು ನೋಡಲು ಹೋಗುತ್ತಿದ್ದ ನವವಿವಾಹಿತೆ

ವಿವಾಹದ ಬಳಿಕ ಗಂಡನ ಜೊತೆಗಿರಲು ಲಂಡನ್‌ಗೆ ಹೊರಟಿದ್ದ ನವವಿವಾಹಿತೆಯೂ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ಮೃತ ಮಹಿಳೆ. ಜನವರಿಯಲ್ಲಿ ಖುಷ್ಬೂ ಹಾಗೂ ಮನ್ಫೂಲ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಅವರ ಪತಿ ಲಂಡನ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಹೀಗಾಗಿ ಖುಷ್ಬೂ ಲಂಡನ್‌ನಲ್ಲಿದ್ದ ಗಂಡನನ್ನು ನೋಡಲು ಹೊರಟಿದ್ದರು. ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು, ಆಕೆಯನ್ನು ಕಳುಹಿಸಿಕೊಟ್ಟಿದ್ದ ತಂದೆ ಮದನ್‌ ಸಿಂಗ್‌ ಅವರು, ಆಶೀರ್ವಾದ ಮಗಳೇ Going to London ಎಂದು ವಾಟ್ಸಪ್ ಸ್ಟೇಟಸ್ ಹಾಕಿ ಕಳುಹಿಸಿಕೊಟ್ಟಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮಗಳು ಸಾವನ್ನಪ್ಪಿದ್ದಾರೆ.

ಬದುಕಿಗೂ ಕೊನೆಯ ವಿದಾಯವಾಯಿತು

ಲಂಡನ್ ಮೂಲದ ಜೇಮೀ ಮೀಕ್ ತಮ್ಮ ಗುಜರಾತ್ ಭೇಟಿ ಮುಗಿಸಿ ಸ್ವದೇಶಕ್ಕೆ ಮರಳುವ ಮುನ್ನ ಭಾರತದಲ್ಲಿನ ತಮ್ಮ ಅನುಭವಗಳನ್ನು ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮಾಡಿದ್ದರು. ಪೋಸ್ಟ್‌ನಲ್ಲಿ ಭಾರತದಲ್ಲಿನ ತಮ್ಮ ಅದ್ಭುತ ಅನುಭವಗಳನ್ನು ತಮ್ಮ ಗೆಳೆಯ ಫಿಯೊಂಗಲ್ ಗ್ರೀನ್‌ಲಾ-ಮೀಕ್ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಲದೇ ಬುಧವಾರ ರಾತ್ರಿ ಇಂದು ಭಾರತದಲ್ಲಿ ನನ್ನ ಕೊನೆ ರಾತ್ರಿ ಎಂದು ಬೇಸರದಲ್ಲಿ ಹೇಳಿಕೊಂಡಿದ್ದರು.

ಜೇಮೀ ಸ್ವದೇಶಕ್ಕೆ ಮರಳಲು ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಕೆಲವೇ ನಿಮಿಷಗಳ ಮುನ್ನ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತಕ್ಕೆ ವಿದಾಯ ಎಂದು ಹೇಳಿಕೊಂಡಿದ್ದರು. ಆದರೆ ಇದು ಅವರ ಬದುಕಿನ ಕೊನೆಯ ವಿದಾಯವೂ ಆದದ್ದು ದುರದೃಷ್ಟಕರ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top