ಜುಲೈ 1ರಿಂದಲೇ ಜಾರಿಗೆ ಬರಲಿದೆ ಹೊಸ ನಿಯಮ
ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಯದಲ್ಲಿ ಬದಲಾವಣೆ ಮಾಡಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡಬೇಕೆಂದರೆ IRCTC ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ಗೆ ಆಧಾರ್ ಲಿಂಕ್ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಇನ್ಮುಂದೆ ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಏಜೆಂಟ್ಗಳ ಮೇಲೆ ಸಮಯದ ನಿರ್ಬಂಧ ಹೇರಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಈ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಜು.1ರಿಂದ ಜಾರಿಗೆ ಬರುವಂತೆ ತತ್ಕಾಲ್ ಟಿಕೆಟ್ಗಳನ್ನು ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ಐಆರ್ಸಿಟಿಸಿ ವೆಬ್ಸೈಟ್ ಅಥವಾ ಅದರ ಆ್ಯಪ್ ಮೂಲಕ ಬುಕ್ ಮಾಡಬಹುದು. ಜುಲೈ 15ರಿಂದ ತತ್ಕಾಲ್ ಬುಕಿಂಗ್ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಕಂಪ್ಯೂಟರ್ ಆಧಾರಿತ OTPಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆ ಅಥವಾ ಅಧಿಕೃತ ಏಜೆಂಟ್ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ತತ್ಕಾಲ್ ಟಿಕೆಟ್ ಸಾಮಾನ್ಯ ಜನರಿಗೆ ಸಿಗಲಿ ಎನ್ನುವ ಉದ್ದೇಶದಿಂದ ರೈಲ್ವೆ ಸಚಿವಾಲಯ ಮಹತ್ತರ ಬದಲಾವಣೆಯೊಂದನ್ನು ತಂದಿದೆ. ಭಾರತೀಯ ರೈಲ್ವೆಯ ಅಧಿಕೃತ ಏಜೆಂಟ್ಗಳಿಗೆ ತತ್ಕಾಲ್ ಟಿಕೆಟ್ ಆರಂಭವಾಗುವ ಮೊದಲ 30 ನಿಮಿಷದಲ್ಲಿ ಬುಕಿಂಗ್ ಮಾಡುವ ಅವಕಾಶವನ್ನು ನಿರ್ಬಂಧಿಸಿದೆ. ಅಂದರೆ ಬೆಳಗ್ಗೆ 10ರಿಂದ 10.30ರವರೆಗೆ ಎಸಿ, ಬೆಳಗ್ಗೆ 11ರಿಂದ 11.30ರವರೆಗೆ ಆರಂಭವಾಗುವ ನಾನ್ ಎಸಿ ಟಿಕೆಟ್ಗಳನ್ನು ಬುಕ್ ಮಾಡುವುದಕ್ಕೆ ಏಜೆಂಟ್ಗಳಿಗೆ ಅವಕಾಶ ಇಲ್ಲ. ಈ ಅವಧಿಯಲ್ಲಿ ಆಧಾರ್ ದೃಢೀಕರಿಸಿದವರಿಗೆ ಆದ್ಯತೆ ನೀಡಲಾಗಿದೆ.