ಮೊದಲ ಗಣತಿಗೆ ಮಾಡಿದ 165 ಕೋ. ರೂ.ಗೆ ಯಾರು ಹೊಣೆ ಎಂದು ಪ್ರಶ್ನೆ
ಬೆಂಗಳೂರು: ರಾಜ್ಯದಲ್ಲಿ ಮರಳಿ ಜಾತಿ ಗಣತಿ ಮಾಡುವ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯ ಸರ್ಕಾರ ಮತ್ತೆ ಜಾತಿ ಗಣತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ನಡೆದ ಸಮೀಕ್ಷೆ ವರದಿ ಏನು ಮಾಡುತ್ತೀರಿ? 165 ಕೋಟಿ ರೂ. ಖರ್ಚು ಮಾಡಿದ್ದು ನೀರಿನಲ್ಲಿಟ್ಟ ಹೋಮದಂತಾಯಿತೇ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಬಿಜೆಪಿ ಮುಖಂಡ ಸುನಿಲ್ ಕುಮಾರ್ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪವನ್ನು ತೀವ್ರವಾಗಿ ಟೀಕಿಸಿದ್ದು, ಹೈಕಮಾಂಡ್ ಹೇಳಿದ ತಕ್ಷಣ ಜಾತಿ ಗಣತಿ ವರದಿ ಕಸದ ಬುಟ್ಟಿಗೆಸೆದಿರುವುದು ಒಬಿಸಿ ವರ್ಗಕ್ಕೆ ಮಾಡಿದ ಅವಮಾನ. ಖರ್ಚಾದ 165 ಕೋಟಿಗೆ ಯಾರು ಹೊಣೆ? ಹೊಸ ಸಮೀಕ್ಷೆಗೆ ಹಣ ಯಾವ ಮೂಲದಿಂದ ಬರುತ್ತದೆ? ತೆರಿಗೆದಾರರ ಹಣವನ್ನು ಹೇಗೆ ಬೇಕಾದರೂ ಖರ್ಚು ಮಾಡಬಹುದೇ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ದತ್ತಾಂಶದ ಬಗ್ಗೆ ಹೈಕಮಾಂಡ್ ಅನುಮಾನ ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ. ದತ್ತಾಂಶವೇ ಸರಿ ಇಲ್ಲದಿರುವಾಗ ಅದನ್ನು ಆಧರಿಸಿ ಪ್ರವರ್ಗಗಳನ್ನು ಹೇಗೆ ನಿರ್ಮಾಣ ಮಾಡಿದ್ದಾರೆ? ಮೀಸಲಾತಿ ವರ್ಗೀಕರಣಕ್ಕೆ ಅದನ್ನು ಹೇಗೆ ಬಳಸಿದ್ದಾರೆ. ಮನೆಯ ಪಂಚಾಂಗವೇ ಸರಿ ಇಲ್ಲದ ಮೇಲೆ ಮನೆ ಕಟ್ಟಲು ಹೇಗೆ ಸಾಧ್ಯ? ಇವುಗಳಿಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕಿದೆ. ಬಿಜೆಪಿ ನಾಯಕರು ಇದರ ಕುರಿತು ಪ್ರಶ್ನಿಸಿದಾಗ ಅತ್ಯಂತ ಉಡಾಫೆಯಿಂದ, ನಾನು ಜಾತಿಗಣತಿಗೆ ಬದ್ಧನಿದ್ದೇನೆ. ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಪದೇಪದೇ ಹೇಳುತ್ತಿದ್ದರು. ಈಗ ಉಲ್ಟಾ ಹೊಡೆದಿದ್ದು ನೋಡಿದರೆ ಹಲವು ರೀತಿಯ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಜಾತಿ ಜನಗಣತಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ. ಕೇಂದ್ರ ಒಂದೆಡೆ ಜಾತಿಗಣತಿ ಮಾಡುತ್ತಿರುವಾಗ ರಾಜ್ಯ ಸರ್ಕಾರವೂ ಮತ್ತೊಂದು ಜಾತಿಗಣತಿ ಮಾಡುವ ಅಗತ್ಯ ಇದೆಯೇ? ರಾಜ್ಯ ಸರ್ಕಾರ ಕೇಂದ್ರದ ಜಾತಿ ಜನ ಗಣತಿಗೆ ಸಹಕಾರ ಕೊಡಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಬಿಸಿಯವರನ್ನು ಬಳಸುವುದು ಮತ್ತು ಜನರ ದಿಕ್ಕು ತಪ್ಪಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿ ಗಣತಿ ಮಾಡಲು 90 ದಿನಗಳ ಗಡುವು ನೀಡಿದ್ದು ಮತ್ತೊಂದು ಸುಳ್ಳು, ಎಸ್ಸಿ (ಪರಿಶಿಷ್ಟ ಜಾತಿ) ಒಳಮೀಸಲಾತಿಗೆ ಸಂಬಂಧಿಸಿದಂತೆ ಒಂದು ತಿಂಗಳಲ್ಲಿ ಸಮೀಕ್ಷೆ ಮಾಡುವುದಾಗಿ ಹೇಳಿದ್ದರು. ಆ ಸಮೀಕ್ಷೆಯನ್ನೇ 3 ಬಾರಿ ಮುಂದೂಡಿದ್ದೀರಿ. ಈಗ 7 ಕೋಟಿ ಜನರ ಸಮೀಕ್ಷೆಗೆ 3 ತಿಂಗಳ ಗಡುವು ನೀಡಿದ್ದು, ಯಾರನ್ನು ಯಾಮಾರಿಸಲು ಹೊರಟಿದ್ದೀರಿ ಇದು ಸಾಧ್ಯವೇ? ಅಧಿಕಾರ ಬಿಟ್ಟು ಕೊಡಲು ನೀವು 90 ದಿನಗಳ ಗಡುವು ಹಾಕಿದಂತಿದೆ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಸಾವಿಗೆ ಸಂಬಂಧಿಸಿದಂತೆ ಎಐಸಿಸಿ ಸಿಎಂ, ಡಿಸಿಎಂ ಅವರ ತಲೆದಂಡ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಜಾತಿಗಣತಿ ಅಡ್ಡ ಇಟ್ಟು ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಜಾತಿಗಣತಿ ಸಮೀಕ್ಷೆ ಸಮಾಜದ ಉತ್ತಮಕ್ಕಾಗಿ ನಡೆಯುತ್ತಿದೆ. ಈಗಿನ ಸಮೀಕ್ಷೆ ವ್ಯರ್ಥವಾಗುವುದಿಲ್ಲ. ವೈಜ್ಞಾನಿಕವಾಗಿ ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಲಾಗಿದೆ. ಎಲ್ಲ ಸಮುದಾಯಗಳ ಪ್ರತಿನಿಧಿಗಳನ್ನು ಪರಿಗಣಿಸಿ, ನ್ಯಾಯ ನೀಡುವ ಉದ್ದೇಶ ಇದೆ. ಒಕ್ಕಲಿಗರು, ವಿರಶೈವರು ಸೇರಿದಂತೆ ಎಲ್ಲರೂ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.