ಕಾಂತಾರ-1 ಚಿತ್ರದ ಇನ್ನೋರ್ವ ಕಲಾವಿದ ಸಾವು

ಕೆಲವೇ ತಿಂಗಳ ಅಂತರದಲ್ಲಿ ಚಿತ್ರದ ಮೂವರು ಕಲಾವಿದರು ಮೃತ್ಯು

ಮಂಗಳೂರು: ಕರಾವಳಿಯ ದೈವಾರಾಧನೆಯ ಕಥೆಯನ್ನೊಳಗೊಂಡಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ-1 ಚಿತ್ರಕ್ಕೆ ಅಪಘಾತ, ಅವಘಡ ಎಂದು ಪದೇಪದೆ ಅಪಶಕುನ ಎದುರಾಗುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿದ್ದ ಇಬ್ಬರು ಕಲಾವಿದರು ಈ ಮೊದಲು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದರು. ಇದೀಗ ಇನ್ನೋರ್ವ ಕಲಾವಿದ ಮೃತ್ಯುವೀಡಾಗಿದ್ದಾರೆ.

ವಿಜು ವಿ.ಕೆ ಎಂಬುವವರು ಮೃತ ದುರ್ದೈವಿ. ಇವರು ಕೇರಳದ ತ್ರಿಶ್ಶೂರ್​ನವರು. ‘ಕಾಂತಾರ-1’ ಸಿನಿಮಾ ಶೂಟ್​ಗಾಗಿ ಕರ್ನಾಟಕಕ್ಕೆ ಬಂದು ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ. ಕೇರಳದಿಂದ ಕುಟುಂಬಸ್ಥರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ.



















































 
 

ಈ ಮೊದಲು ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ನಿಧನ ಹೊಂದಿದ್ದರು. ಇದಾದ ಬಳಿಕ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಮೃತಪಟ್ಟರು. ಈಗ ಸಿನಿಮಾದ ಮತ್ತೋರ್ವ ಜೂನಿಯರ್ ಕಲಾವಿದ ಕೊನೆಯುಸಿರು ಎಳೆದಿದ್ದಾರೆ. ಈ ಮೂಲಕ ಕೆಲವೇ ತಿಂಗಳ ಅಂತರದಲ್ಲಿ ಚಿತ್ರದ ಮೂವರು ಮೃತಪಟ್ಟಂತೆ ಆಗಿದೆ.

ಜೂನಿಯರ್ ಆರ್ಟಿಸ್ಟ್​ ಕಪಿಲ್ ಶೂಟಿಂಗ್ ಮುಗಿಸಿದ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ತಮ್ಮ ತಂಡದವರ ಜೊತೆ ಈಜಲು ತೆರಳಿ ನೀರಿನ ಆಳ ತಿಳಿಯದೆ ನದಿಗೆ ಇಳಿದು ಮುಳುಗಿ ಮೃತಪಟ್ಟಿದ್ದರು. ನೀರಿನೊಳಗೆ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಮೇ 6ರಂದು ಈ ಘಟನೆ ನಡೆದಿತ್ತು.

ಆ ಬಳಿಕ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಕೂಡ ಮೃತಪಟ್ಟರು. ‘ಕಾಂತಾರ-1’ ಚಿತ್ರದಲ್ಲಿ ಇವರು ಪ್ರಮುಖ ಪಾತ್ರ ಮಾಡುತ್ತಿದ್ದರು. ಅವರು ಕಾರ್ಕಳದಲ್ಲಿ ಗೆಳೆಯನ ಮದುವೆಯ ಮೆಹಂದಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದರು.
ಕಾಂತಾರ ಚಿತ್ರದ ಮುಂದುವರಿದ ಭಾಗ ‘ಕಾಂತಾರ-1’. ‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಭಾರಿ ಯಶಸ್ಸು ಕಂಡಿತ್ತು. ಇದೇ ಹುಮ್ಮಸ್ಸಿನಲ್ಲಿ ರಿಷಬ್‌ ಅದೇ ಹೆಸರಿನಲ್ಲಿ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಆರಂಭದಿಂದಲೇ ಅಡ್ಡಿ ಅಡಚಣೆಗಳು ಎದುರಾಗುತ್ತಿವೆ. ಬಸ್‌ ಅಪಘಾತ, ಅರಣ್ಯಾಧಿಕಾರಿಗಳಿಂದ ತಡೆ ಮತ್ತಿತರ ವಿಘ್ನಗಳು ಎದುರಾದಾಗ ರಿಷಬ್‌ ಶೆಟ್ಟಿ ದೈವಸ್ಥಾನಗಳಿಗೆ ಹೋಗಿ ಪ್ರಾರ್ಥನೆ ಮಾಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top