ರಾಕೆಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮುಂದೂಡಿಕೆ
ಹೊಸದಿಲ್ಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಅವರ ಗಗನಯಾತ್ರೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಈ ಸಲ ಅವರು ಪ್ರಯಾಣಿಸಬೇಕಿದ್ದ ರಾಕೆಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಮುಂದೂಡಿಕೆಗೆ ಕಾರಣವಾಗಿದೆ. ಮಂಗಳವಾರಕ್ಕೆ ನಿಗದಿಯಾಗಿದ್ದ ಗಗನಯಾತ್ರೆ ಪ್ರತಿಕೂಲ ವಾತಾವರಣದ ಕಾರಣ ಬುಧವಾರಕ್ಕೆ ಮುಂದೂಡಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿ ಎರಡನೇ ಸಲ ಮುದೂಡಿಕೆಯಾಗಿದೆ.
ಶುಭಾಂಶು ಶುಕ್ಲ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತೊಯ್ಯಬೇಕಿದ್ದ ಆ್ಯಕ್ಸಿಯಮ್-4 ಮಿಷನ್ ಉಡಾವಣೆಯನ್ನು ರಾಕೆಟ್ನಲ್ಲಿ ಕಂಡುಬಂದ ತಾಂತ್ರಿಕ ದೋಷದ ಕಾರಣಕ್ಕೆ ಮುಂದಕ್ಕೆ ಹಾಕಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.
ಈ ಮಿಷನ್ ಅಡಿಯಲ್ಲಿ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊತ್ತೊಯ್ಯಬೇಕಿದ್ದ ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನ ತಾಂತ್ರಿಕ ದೋಷವನ್ನು ಸರಿಪಡಿಸಲು ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಲಾಗಿದೆ. ರಾಕೆಟ್ನ ಪೋಸ್ಟ್ ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ವೇಳೆ ಎಲ್ಒಎಕ್ಸ್ ಸೋರಿಕೆ ಪತ್ತೆಯಾಗಿದ್ದು, ಇದನ್ನು ದುರಸ್ತಿಪಡಿಸಬೇಕಿದೆ.
ಸ್ಪೇಸ್ಎಕ್ಸ್ ತಂಡಕ್ಕೆ ರಾಕೆಟ್ನ ಪೋಸ್ಟ್ ಸ್ಟ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ವೇಳೆ ಪತ್ತೆಯಾದ ಎಲ್ಒಎಕ್ಸ್ ಸೋರಿಕೆ ದುರಸ್ತಿಗೆ ಹೆಚ್ಚುವರಿ ಸಮಯ ಬೇಕಿದ್ದ ಕಾರಣ ನಾಳೆ ನಡೆಯಬೇಕಿದ್ದ ಎಎಕ್ಸ್-4ನ ಫಾಲ್ಕನ್ 9 ಉಡಾವಣೆಯಿಂದ ಹಿಂದೆ ಸರಿಯಬೇಕಿದೆ. ಇದು ಪೂರ್ಣಗೊಂಡ ಬಳಿಕ ಹೊಸ ಉಡಾವಣೆ ದಿನಾಂಕ ಪ್ರಕಟಿಸಲಾಗುವುದು ಎಂದು ಸ್ಪೇಸ್ ಎಕ್ಸ್ ಸ್ಪಷ್ಟಪಡಿಸಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ ಭಾರತೀಯ ಕಾಲಮಾನ ಬುಧವಾರ ಸಂಜೆ 5.30ಕ್ಕೆ ಫ್ಲೋರಿಡಾದ ಸ್ಪೇಸ್ ಎಕ್ಸ್ ಸ್ಟೇಷನ್ನಿಂದ ರಾಕೆಟ್ ಉಡಾವಣೆಯಾಗಬೇಕಿತ್ತು. ಈ ಗಗನಯಾತ್ರೆ ಯಶಸ್ವಿಯಾದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸುವ ಭಾರತದ ಮೊದಲ ಗಗನಯಾತ್ರಿ ಎಂಬ ಬಹುದೊಡ್ಡ ಹಿರಿಮೆಗೆ ಶುಭಾಂಶು ಶುಕ್ಲ ಪಾತ್ರರಾಗಲಿದ್ದಾರೆ.