ರಾಸಾಯನಿಕ, ತೈಲ ತುಂಬಿರುವ ಕಂಟೈನರ್ಗಳು ಸ್ಫೋಟಿಸುವ ಆತಂಕ
ಮಂಗಳೂರು: ಕೇರಳದ ಕರಾವಳಿ ಸಮೀಪ ಸಿಂಗಾಪುರ ಮೂಲದ ಕಂಟೈನರ್ ಸಾಗಿಸುತ್ತಿದ್ದ ಬೃಹತ್ ಹಡಗಿಗೆ ಭೀಕರ ಸ್ಫೋಟದ ಬಳಿಕ ಹತ್ತಿಕೊಂಡ ಬೆಂಕಿಯನ್ನು ನಂದಿಸಲು 48 ತಾಸುಗಳ ಸತತ ಕಾರ್ಯಾಚರಣೆಯ ಬಳಿಕವೂ ಸಾಧ್ಯವಾಗಿಲ್ಲ. ಹಡಗಿನಲ್ಲಿ ರಾಸಾಯನಿಕವೂ ಸೇರಿದಂತೆ ಅಪಾಯಕಾರಿ ತೈಲ ಮತ್ತು ಅನಿಲ ಇರುವ ಕಂಟೈನರ್ಗಳು ಕೂಡ ಇವೆ. ಹೀಗಾಗಿ ಈ ಹಡಗು ಕರಾವಳಿ ಭಾಗದಲ್ಲಿ ತೀವ್ರ ಆತಂಕ ಹುಟ್ಟಿಸಿದೆ.
ಕೆಲದಿನಗಳ ಹಿಂದೆಯಷ್ಟೇ ಕೇರಳ ಕರಾವಳಿಯಾಚೆ ಕಂಟೈನರ್ ಹಡಗೊಂದು ಮುಳುಗಿ ಅನೇಕ ಕಂಟೈನರ್ಗಳು ಸಮುದ್ರ ಪಾಲಾಗಿದ್ದವು. ಈ ಆತಂಕ ದೂರವಾಗುವ ಮೊದಲೇ ಇನ್ನೊಂದು ಆಪತ್ತು ಬಂದೆರಗಿದೆ. ಬೆಂಕಿಯುಗುಳುತ್ತಲೇ ಇರುವ ಹಡಗನ್ನು 48 ಗಂಟೆ ಕಳೆದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಬೆಂಕಿ ನಂದಿಸಲು ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಲರಾಶಿಯ ನಡುವೆ ಇದ್ದರೂ ಹಡಗಿನೊಳಗಿನ ಬೆಂಕಿ ಇನ್ನೂ ಧಗಧಗಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಹಡಗಿನೊಳಗಿರುವ ರಾಸಾಯನಿಕ ತುಂಬಿರುವ ಕಂಟೈನರ್ಗೆ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ. ಹೀಗಾದರೆ ಹಡಗಿನಲ್ಲಿ ಇನ್ನಷ್ಟು ಸ್ಫೋಟಗಳು ಸಂಭಿವಿಸಿ ಅದು ಪೂರ್ತಿಯಾಗಿ ಮುಳುಗುವ ಸಾಧ್ಯತೆಯಿದೆ. ನೌಕಾಪಡೆ ಮತ್ತು ಕರಾವಳಿ ಪಡೆಯವರು ಸಂಭಾವ್ಯ ಅನಾಹುತ ತಪ್ಪಿಸಲು ಭಾರಿ ಹೋರಾಟ ನಡೆಸುತ್ತಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿರುವ ಹಡಗಿನಲ್ಲಿ ಪೆಟ್ರೋಲ್, ಡೀಸೆಲ್, ನೈಟ್ರೋ ಸೆಲ್ಯೂಲೋಸ್ನಂತಹ ಕಂಟೈನರ್ಗಳು ಇರುವುದು ಆತಂಕ ಹೆಚ್ಚಿಸಿದೆ. ಒಟ್ಟಾರೆ ಅದರಲ್ಲಿರುವ 600ಕ್ಕೂ ಅಧಿಕ ಕಂಟೇನರ್ಗಳಲ್ಲಿ 157 ಕಂಟೇನರ್ಗಳಲ್ಲಿ ಅಪಾಯಕಾರಿ ಸರಕುಗಳು ಇರುವುದು ದೃಢಪಟ್ಟಿದೆ. ಹಡಗಿನಲ್ಲಿದ್ದ 18 ಮಂದಿಯನ್ನು ಭಾರತೀಯ ನೌಕಾದಳ ರಕ್ಷಿಸಿ, ಮಂಗಳೂರಿಗೆ ಕರೆ ತಂದಿದೆ. ಉಳಿದಂತೆ ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರಿದಿದೆ.
240 ಟನ್ ಡೀಸೆಲ್, 2,000 ಟನ್ ಇಂಧನ ತೈಲ ಇದ್ದು, ಅದಲ್ಲದೇ ಇತರ ತೈಲ ಸಾಮಗ್ರಿಗಳು, ಪ್ಲಾಸ್ಟಿಕ್ ಇವೆಲ್ಲವೂ ಬೆಂಕಿ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಬಲವಾಗಿ ಬೀಸುತ್ತಿರುವ ಮುಂಗಾರು ಮಾರುತದ ಗಾಳಿ ಬೆಂಕಿಯ ಕೆನ್ನಾಲಿಗೆಯ ಬಿರುಸನ್ನು ಹೆಚ್ಚಿಸುತ್ತಿದೆ. ಹಡಗಿನಲ್ಲಿ ಮೆರೈನ್ ಇಂಜಿನಿಯರ್ಗಳು ಮತ್ತಿ ಇಂಜಿನ್ ವಿಭಾಗದ ತಂತ್ರಜ್ಞರೂ ಇದ್ದರೂ ಇಂತಹ ಅವಘಡ ಸಂಭವಿಸಿರುವುದು ಆಶ್ಚರ್ಯ ಮೂಡಿಸಿದೆ. ನಾಪತ್ತೆಯಾಗಿರುವವರಲ್ಲಿ ಇಬ್ಬರು ಇಂಜಿನಿಯರ್ಗಳು ಕೂಡ ಇದ್ದಾರೆ.