ಪ್ರಬಲ ಜಾತಿಗಳ ವಿರೋಧಕ್ಕೆ ಮಣಿದು ಮರು ಜಾತಿ ಗಣತಿಗೆ ಸೂಚಿಸಿದ ಹೈಕಮಾಂಡ್
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಜಾತಿ ಗಣತಿಗಾಗಿ ಮರಳಿ ಸರ್ವೇ ಮಾಡಲು ಸೂಚಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಾಗಿರುವ ಹಿನ್ನಡೆಯೆಂದೇ ಭಾವಿಸಲಾಗುತ್ತಿದೆ. ಸಿದ್ದರಾಮಯ್ಯನವರು ಹಳೆಯ ಜಾತಿಗಣತಿ ವರದಿಯನ್ನೇ ಯಥಾವತ್ತಾಗಿ ಜಾರಿಗೊಳಿಸಲು ಶತಾಯಗತಾಯ ಮುಂದಾಗಿದ್ದರು. ಡಿ.ಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು, ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯಗಳ ವಿರೋಧದ ನಡುವೆಯೂ ಸಿದ್ದರಾಮಯ್ಯನವರು 10 ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನೇ ಜಾರಿಗೆ ತರಲು ಕಸರತ್ತು ನಡೆಸಿದ್ದರು. ಅದನ್ನು ಕಾಂಗ್ರೆಸ್ ಹೈಕಮಾಂಡ್ ಕಸದಬುಟ್ಟಿಗೆ ಎಸೆದು ಹೊಸದಾಗಿ ಸರ್ವೇ ಮಾಡಿ ಎಂದಿರುವುದು ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯಗೆ ಆಗಿರುವ ದೊಡ್ಡ ಹಿನ್ನಡೆ ವ್ಯಾಖ್ಯಾನಿಸಲಾಗಿದೆ.
ರಾಹುಲ್ ಗಾಂಧಿ ಕರೆಯ ಮೇರೆಗೆ ಮಂಗಳವಾರ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ಜೊತೆ ಹೈಕಮಾಂಡ್ ಮಹತ್ವದ ಮಾತುಕತೆ ನಡೆಸಿದೆ. ಕಾಲ್ತುಳಿತ ಘಟನೆ ಜೊತೆ ಸಂಪುಟ ಸರ್ಜರಿ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಪ್ರಮುಖವಾಗಿ ಜಾತಿಗಣತಿ ವಿಚಾರದ ಬಗ್ಗೆ ಚರ್ಚಿಸಲಾಗಿದೆ. ವಿವಾದಕ್ಕೆ ಗುರಿಯಾಗಿರುವ ಹಾಲಿ ಜಾತಿಗಣತಿ ವರದಿ ಕೈಬಿಡಲು ಹೈಕಮಾಂಡ್ ಸೂಚಿಸಿದ್ದು, ಮರು ಸರ್ವೇ ಮಾಡುವಂತೆ ಹೇಳಿದೆ. ಇದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಮತ್ತೆ ಮರು ಜಾತಿ ಗಣತಿ ಸಮೀಕ್ಷೆ ಮಾಡಿಸುವುದಾಗಿ ಘೋಷಣೆ ಮಾಡಿದ್ದಾರೆ. ಮಠಾಧೀಶರು, ಪ್ರಬಲ ಸಮುದಾಯಗಳ ವಿರೋಧ ಬೆನ್ನಲ್ಲೇ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಈಗ ಹೈಕಮಾಂಡ್ ಏಕಾಏಕಿ ಹೀಗೊಂದು ನಿರ್ಧಾರ ಕೈಗೊಳ್ಳಲು ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಮಾಡಿಸಿದ ಜಾತಿ ಗಣತಿ ವರದಿಗೆ ರಾಜ್ಯದ ಪ್ರಬಲ ಸಮುದಾಯಗಳ ಜೊತೆಗೆ ಕೆಲವು ಹಿಂದುಳಿದ ಸಮುದಾಯಗಳು ಕೂಡ ಭಾರಿ ಆಕ್ಷೇಪ ಎತ್ತಿದ್ದವು. ಈ ಜಾತಿಗಣತಿ ವರದಿ ಜಾರಿಯಾದರೆ ಕಾಂಗ್ರೆಸ್ ಪ್ರಬಲ ಸಮುದಾಯಗಳ ಜೊತೆ ಕೆಲವು ಹಿಂದುಳಿದ ಸಮುದಾಯಗಳ ವಿರೋಧವನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಈ ಜಾತಿ ಗಣತಿ ವರದಿ ಬರೀ ಅಹಿಂದ ಸಮುದಾಯದ ಉದ್ಧಾರವನ್ನು ಮಾತ್ರ ಅಭಿವೃದ್ಧ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ಹೈಕಮಾಂಡ್ಗೆ ಮನವರಿಕೆ ಮಾಡುವಲ್ಲಿ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಹೀಗಾಗಿ ಹೈಕಮಾಂಡ್ ದಿಢೀರ್ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ದೆಹಲಿಗೆ ಕರೆಸಿ ಹೊಸದಾಗಿ ಸರ್ವೇ ಮಾಡಲು ಸೂಚಿಸಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ವರಿಷ್ಠರಿಗೆ ಕರ್ನಾಟಕದ ಪ್ರಬಲ ಜಾತಿಗಳ ವಿರೋಧ ಕಟ್ಟಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಹೈಕಮಾಂಡ್ ಸೂಚನೆ ಮೇರೆಗೆ ಜಾತಿ ಗಣತಿಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
ಹಳೆಯ ಜಾತಿ ಜನಗಣತಿ ಸರ್ವೇಯಲ್ಲಿ ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆ ಇತ್ತು. ಇದು ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಎರಡು ಸಮುದಾಯಗಳ ಅಸಮಾಧಾನ ತಣಿಸಲು ಹೊಸ ಸರ್ವೇ ಮಾಡಲಾಗುತ್ತಿದೆ. ಇನ್ನು ಮುಂದೆ ಸ್ಥಳೀಯ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತಬೀಳುವ ಸಾಧ್ಯತೆ ಭಯದಿಂದ ಹೈಕಮಾಂಡ್ ಹಳೆ ಜಾತಿ ಗಣತಿ ವರದಿಗೆ ಬ್ರೇಕ್ ಹಾಕಿ ಎನ್ನಲಾಗಿದೆ.
ಇದಲ್ಲದೆ ಜಾತಿ ಗಣತಿ 10 ವರ್ಷ ಹಳೆಯದಾದ ಕಾರಣ ಇದಕ್ಕೂ ಅಪಸ್ವರ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮರು ಜಾತಿ ಗಣತಿಗೆ ಹೈಕಮಾಂಡ್ ಸೂಚಿಸಿದೆ. ಈ ನಿಟ್ಟಿನಲ್ಲಿ ಗುರುವಾರ ವಿಶೇಷ ಸಂಪುಟ ಸಭೆಯನ್ನು ಕರೆಯಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಸ್ವಪಕ್ಷದವರ ವಿರೋಧವನ್ನು ಲೆಕ್ಕಿಸದೆ ಕಳೆದ ಏಪ್ರಿಲ್ 11ರಂದು ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಮಂಡಿಸಲಾಗಿತ್ತು. ಮುಸ್ಲಿಮರನ್ನು ನಂಬರ್ 1 ಜನಸಂಖ್ಯೆ ಎಂದು ತೋರಿಸಿ ಪರಿಶಿಷ್ಟ ಸಮುದಾಯವನ್ನು ನಂಬರ್ 2 ಎಂದು ತೋರಿಸಲಾಗಿತ್ತು. ಒಕ್ಕಲಿಗ, ಲಿಂಗಾಯತ ಸಮುದಾಯ ಇದರ ವಿರುದ್ಧ ಸಿಡಿದೆದ್ದು, ಜಾತಿಗಣತಿ ವರದಿ ಜಾರಿಯಾದ್ರೆ ಸರ್ಕಾರ ಬಿದ್ದೋಗಲಿದೆ ಎಂದು ಎಚ್ಚರಿಕೆ ನೀಡಿದ್ದವು. ಪ್ರತಿಭಟನೆಗೆ ಬೆಚ್ಚಿಬಿದ್ದಿದ್ದ ಸರ್ಕಾರ ಜಾತಿಗಣತಿ ವರದಿ ಜಾರಿಯನ್ನು ಮುಂದೂಡಿತ್ತು.
ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿ ಒಕ್ಕಲಿಗ, ಲಿಂಗಾಯತ ನಾಯಕರು ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದರು. ವೀರಶೈವ ಲಿಂಗಾಯತ ಮಹಾಸಭಾ ಮೊದಲಿನಿಂದಲೂ ಹಳೇ ಸರ್ವೇಗೆ ವಿರೋಧಿಸಿತ್ತು. ರಾಜ್ಯ ಒಕ್ಕಲಿಗರ ಸಂಘ ಕೂಡ ಹಳೇ ಸರ್ವೇಯನ್ನು ತೀವ್ರವಾಗಿ ವಿರೋಧಿಸಿತ್ತು. ಈ ಪ್ರಬಲ ಸಮುದಾಯಗಳ ಒತ್ತಾಯ, ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ. ಒಟ್ಟಿನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ 10ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿಗಣತಿ ಮಾಡಲು ರಾಜ್ಯಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದು ಹೊಸದೊಂದೂ ರಾಜಕೀಯ ಸಮರಕ್ಕೆ ನಾಂದಿಹಾಡಿದೆ. 90 ದಿನದೊಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.