ಹಡಗಿನಲ್ಲಿ ಭೀಕರ ಅಗ್ನಿ ಅವಘಡ : ನಾಲ್ಕು ಸಿಬ್ಬಂದಿ ನಾಪತ್ತೆ; 18 ಮಂದಿಯ ರಕ್ಷಣೆ

ಗಾಯಗೊಂಡವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಂಗಳೂರು : ಕೇರಳದ ಕೊಚ್ಚಿ ಕರಾವಳಿ ತೀರದಿಂದ ಸುಮಾರು 78 ನಾಟಿಕಲ್‌ ಮೈಲು ದೂರದಲ್ಲಿ ಸರಕು ಸಾಗಿಸುವ ಹಡಗಿಗೆ ಬೆಂಕಿ ಹತ್ತಿಕೊಂಡು ಭಾರಿ ದುರಂತ ಸಂಭವಿಸಿದೆ. ಸಿಂಗಾಪುರ ಮೂಲದ ಹಡಗಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ಹಡಗಿನ 18 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಅಝಿಕ್ಕಲ್ ಮತ್ತು ಕೊಚ್ಚಿಯ ಮಧ್ಯದಲ್ಲಿ ಈ ದುರಂತ ಸಂಭವಿಸಿದೆ. ಸಿಂಗಾಪುರ ಮೂಲದ ಕಂಟೇನರ್ ಹಡಗಿನ ಎಂವಿ ವಾನ್ ಹೈ 503ನಲ್ಲಿದ್ದ 22 ಸಿಬ್ಬಂದಿ ಹಡಗಿನಿಂದ ಸಮುದ್ರಕ್ಕೆ ಹಾರಿದ 18 ಮಂದಿಯನ್ನು ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ರಕ್ಷಿಸಿವೆ ಎಂದು ನೌಕಾ ಪಡೆಯ ಮೂಲಗಳು ತಿಳಿಸಿವೆ.

ಸಮುದ್ರದ ಮಧ್ಯೆ ಹಡಗಿನ ಮಧ್ಯಭಾಗವನ್ನು ಬೆಂಕಿ ವೇಗವಾಗಿ ಆವರಿಸಿತು. ಆ ಹಡಗು ಇನ್ನೂ ಹೊತ್ತಿ ಉರಿಯುತ್ತಲೇ ಇದೆ. 10-15 ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿವೆ ಎಂದು ಕೋಸ್ಟ್ ಗಾರ್ಡ್ ಮೂಲ ತಿಳಿಸಿದೆ. ಈ ಹಡಗಿನಲ್ಲಿ 8 ಚೀನಿ, 6 ಥೈವಾನೀಸ್, 5 ಮ್ಯಾನ್ಮಾರ್ ಮತ್ತು 3 ಇಂಡೋನೇಷ್ಯಾ ಪ್ರಜೆಗಳು ಸೇರಿದಂತೆ 22 ಸಿಬ್ಬಂದಿ ಇದ್ದರು. ಹಡಗಿನ ಸ್ಫೋಟ ಉಂಟಾದಾಗ ಸಿಬ್ಬಂದಿ ಸಮುದ್ರಕ್ಕೆ ಹಾರಿದರು. 18 ಸಿಬ್ಬಂದಿಯನ್ನು ರಕ್ಷಿಸಲಾಗಿದೆ, ಆದರೆ ನಾಲ್ವರು ಕಾಣೆಯಾಗಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.



















































 
 

ಹಡಗು ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಹೋಗುತ್ತಿತ್ತು. ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದೆ. ಅಗ್ನಿ ಅವಘಡದಿಂದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ನೌಕಾಪಡೆಯ ಐಎನ್‌ಎಸ್‌ ಸೂರತ್ ಹಡಗಿನಲ್ಲಿ ಮಂಗಳೂರಿಗೆ ಕರೆತರಲಾಗಿದೆ. ಕೇರಳದ ಬೇಪೋರ್ ಕಡಲ ತೀರದಿಂದ 78 ನಾಟಿಕಲ್ ಮೈಲ್ಸ್ ದೂರದ ಆಳ ಸಮುದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top