ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಪಾರಾರಿಯಾಗಿದ್ದು ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಇಂದು ಸುಮಾರು 50 ಕ್ಕೂ ಅಧಿಕ ಕೃಷಿಕರು ಬಂಟ್ವಾಳ ನಗರ ಪೋಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ವಂಚನೆಗೆ ಒಳಗಾದ ಕೃಷಿಕರು ಹಣ ನೀಡದೆ ವಂಚಿಸಿದ ವ್ಯಕ್ತಿಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಸ್ಥಳೀಯ ಕೃಷಿಕ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಸಾಲದ ಮೊತ್ತ ಪಾವತಿಯ ಹಿನ್ನಲೆಯಲ್ಲಿ ವ್ಯಾಪಾರಿಯ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಕೃಷಿಕರೆಲ್ಲರು ಒಂದಾಗಿ ಆತನ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ. ಈತ ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದು, ಕಳೆದ ಎರಡು ಮೂರು ದಶಕಗಳಿಂದ ಕೃಷಿಕರು ಈತನಿಗೆ ಒಣ ಅಡಿಕೆ ನೀಡಿ ಸ್ವಲ್ಪ ಸಮಯದ ಬಳಿಕ ಹಣ ಪಡೆದುಕೊಳ್ಳುತ್ತಿದ್ದರು. ಆತ ಯಾವುದೇ ರೀತಿಯಲ್ಲಿ ವಂಚಿಸದೆ ಕೃಷಿಕರ ಅಗತ್ಯಕ್ಕೆ ತಕ್ಕಂತೆ ಹಣ ನೀಡುತ್ತಿದ್ದ ಎನ್ನಲಾಗಿದೆ. ಆದರೆ ಈ ಬಾರಿ ಒಬ್ಬೊಬ್ಬ ಕೃಷಿಕನಿಗೆ ಲಕ್ಷಾಂತರ ರೂ ಹಣ ವಂಚನೆ ಮಾಡಿದ್ದು ಒಟ್ಟು ಮೊತ್ತ 10 ಕೋಟಿ ಆಗಬಹುದೆಂದು ಕೃಷಿಕರು ಆರೋಪಿಸಿದ್ದಾರೆ.