ಚೆನ್ನೈ: ಯುವ ವೈದ್ಯನೋರ್ವ ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಡೈಕೆನಾಲ್ ನಲ್ಲಿ ಬೆಳಕಿಗೆ ಬಂದಿದೆ.
ದಿಂಡಿಗಲ್ ಜಿಲ್ಲೆಯ ವೇದಚಂದೂರಿನ ಡಾ. ಜೋಶುವಾ ಸಾಮ್ರಾಜ್ ಆತ್ಮಹತ್ಯೆ ಮಾಡಿಕೊಂಡವರು.
ಜೋಶುವಾ ಅವರು ವೈದ್ಯಕೀಯ ಪದವಿ ಪೂರ್ಣಗೊಳಿಸಿ ತಮಿಳುನಾಡಿನಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ಸದ್ಯ ಡಾ. ಜೋಶುವಾ ಸಾಮ್ರಾಜ್ ಸೇಲಂನಲ್ಲಿ (ಡಾಕ್ಟರ್ ಆಫ್ ಮೆಡಿಸಿನ್) ವ್ಯಾಸಂಗ ಮಾಡುತ್ತಿದ್ದು, ಮಧುರೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಜೋಶುವಾ ನಾಪತ್ತೆಯಾಗಿದ್ದರು ಎನ್ನಲಾಗಿದೆ ಈ ಕುರಿತು ಸಂಬಂಧಿಕರು ವೇದಚಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೂಂಬರೈ ಅರಣ್ಯ ಪ್ರದೇಶದ ಬಳಿ ಕಾರೊಂದು ಮೂರೂ ನಾಲ್ಕು ದಿನಗಳಿಂದ ನಿಂತಿರುವುದು ಕಂಡು ಬಂದಿದ್ದು ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ಪರಿಶೀಲಿಸಿದ ವೇಳೆ ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಅಲ್ಲದೆ ಮೃತ ವ್ಯಕ್ತಿ ತನ್ನ ದೇಹಕ್ಕೆ ಯಾವುದೋ ಅಮಲು ಪದಾರ್ಥವನ್ನು ಸಿರೆಂಜ್ ಮೂಲಕ ಚುಚ್ಚಿರುವುದು ಕಂಡು ಬಂದಿದ್ದು ಇದರಿಂದ ಆತ್ಮಹತ್ಯೆ ಮಾಡಿಕೊಂಡಂತಿದೆ ಅಲ್ಲದೆ ಮೃತ ವ್ಯಕ್ತಿ ನಾಪತ್ತೆಯಾಗಿರುವ ವೈದ್ಯ ಜೋಶುವಾ ಅವರದ್ದೇ ಎಂಬುದನ್ನು ಸಂಬಂಧಿಕರು ದೃಢಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಡೆತ್ ನೋಟ್ ಆಧಾರದ ಮೇಲೆ ಜೊತೆಗೆ ಸಂಬಂಧಿಕರ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.