ಥ್ರಿಲ್ಲರ್ ಸಿನಿಮಾ ಮಾದರಿ ಇದೆ ಈ ಪ್ರಕರಣ
ಶಿಲ್ಲಾಂಗ್: ಹನಿಮೂನ್ಗೆಂದು ಮೇಘಾಲಯಕ್ಕೆ ತೆರಳಿದ ಬಳಿಕ ದಂಪತಿ ನಾಪತ್ತೆಯಾಗಿದ್ದ ಪ್ರಕರಣ ಥ್ರಿಲ್ಲರ್ ಸಿನಿಮಾ ಮಾದರಿ ಟ್ವಿಸ್ಟ್ ಪಡೆದುಕೊಂಡಿದ್ದು, ಪತಿಯನ್ನು ನವವಿವಾಹಿತ ಪತ್ನಿಯೇ ಕೊಲ್ಲಿಸಿರುವುದು ಬಯಲಾಗಿದೆ. ಹತ್ಯೆ ಆರೋಪದಲ್ಲಿ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ಇಂದೋರ್ನ ದಂಪತಿ ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ ಬಳಿಕ ನಿಗೂಢವಾಗಿ ನಾಪತ್ತೆಯಾದ ಪ್ರಕರಣ ದೇಶದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಟೂರಿಸ್ಟ್ ಗೈಡ್ ನೀಡಿದ್ದ ಸಣ್ಣ ಸುಳಿವೊಂದು ಇಡೀ ಪ್ರಕರಣವನ್ನು ಬಯಲೆಗೆಳೆಯಲು ಪೊಲೀಸರಿಗೆ ನೆರವಾಗಿದೆ.

ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ನಿ ಸೋನಮ್ಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾ ರಘುವಂಶಿ (30) ಹತ್ಯೆಗೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಸೋನಮ್ ಕೊಲೆಗಾರರನ್ನು ನೇಮಿಸಿಕೊಂಡು ಹನಿಮೂನ್ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ.
ಸೋನಮ್ಗೆ ಮದುವೆಗೂ ಮೊದಲೇ ರಾಜಾ ಕುಶಾಹ ಎಂಬ ಯುವಕನ ಜೊತೆ ಸಂಬಂಧ ಇತ್ತು. ಹೀಗಾಗಿ ಹನಿಮೂನ್ ಸಂದರ್ಭದಲ್ಲಿ ಪತಿಯನ್ನು ಮುಗಿಸಲು ಸಂಚು ಮಾಡಿ ಮಧ್ಯ ಪ್ರದೇಶದ ಬಾಡಿಗೆ ಹಂತಕರಿಗೆ ಸುಪಾರಿ ನೀಡಿದ್ದಳು. ಪತಿಯನ್ನು ಹತ್ಯೆ ಮಾಡಿದ ಬಳಿಕ ಸದ್ದಿಲ್ಲದೆ ತಪ್ಪಿಸಿಕೊಂಡು ಗಾಜಿಪುರಕ್ಕೆ ತಲುಪಿದ್ದಳು. ಅಲ್ಲಿಂದ ತನ್ನ ಮನೆಗೆ ಫೋನ್ ಮಾಡಿದ್ದು, ಇದು ಪೊಲೀಸರಿಗೆ ಅವಳಿರುವ ಸ್ಥಳವನ್ನು ಪತ್ತೆಹಚ್ಚಲು ನೆರವಾಯಿತು.

ಮೇ 23ರಂದು ಹನಿಮೂನ್ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಹಸುರಿನಿಂದ ಕಂಗೋಳಿಸುತ್ತಿದ್ದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ರಾಜಾ ರಘುವಂಶಿಯದ್ದು ಎಂದು ಪತ್ತೆ ಮಾಡಲಾಗಿತ್ತು. ಪತ್ನಿಯ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಸ್ಥಳೀಯ ಗೈಡ್ವೊಬ್ಬರ ಹೇಳಿಕೆ ಪ್ರಕರಣಕ್ಕೆ ರೋಚಕ ತಿರುವು ನೀಡಿತ್ತು.
ಮೇ 23ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್ನಿಂದ ಮಾವ್ಲಾಖಿಯಾತ್ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ 22ರಂದು ದಂಪತಿಯನ್ನು ನೊಂಗ್ರಿಯಾಟ್ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನು ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್ನನ್ನು ನೇಮಕ ಮಾಡಿಕೊಂಡ ದಂಪತಿ ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು ಎಂದು ಹೇಳಿದ್ದಾರೆ.
ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.