ಪುತ್ತೂರು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವತಿಯಿಂದ ಬೆಂಗಳೂರಿನ ಹೆಸರಘಟ್ಟದಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ದಡಿಯಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಆಹಾರ ಮತ್ತು ಕೃಷಿ ಸಮ್ಮೇಳನದಲ್ಲಿ ಪುತ್ತೂರಿನ ಮುಕ್ವೆಯಲ್ಲಿ ಕಾರ್ಯಾಚರಿಸುತ್ತಿರುವ ನಿಧಿ ಫುಡ್ಸ್’ನ ಮ್ಹಾಲಕ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ‘ ‘ಇನೋವೇಟಿವ್ ಎಂಟ್ರೆಪ್ರೆನ್ಯೂರ್ – ಅವಾರ್ಡ್ ಆಫ್ ಎಗ್ಸಲೆನ್ಸ್’ ಪ್ರಶಸ್ತಿ ಲಭಿಸಿದೆ.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಘ್ ಚೌಹಾಣ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 700 ಜಿಲ್ಲೆಗಳ 2,000ಕ್ಕೂ ಅಧಿಕ ವಿಜ್ಞಾನಿಗಳು ಭಾಗವಹಿಸಿದ್ದ ಈ ಬೃಹತ್ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಚೌಹಾಣ್ ಅವರು ಒಂದೂವರೆ ಕೋಟಿ ರೈತರೊಂದಿಗೆ ಸಂವಾದ ನಡೆಸಿದ್ದರು.
ಹಲಸಿನ ಬೀಜದ ಮೌಲ್ಯವರ್ಧನೆ
ರಾಧಾಕೃಷ್ಣರು ಈಗಾಗಲೇ ‘ನಿತ್ಯ’ ಬ್ರಾಂಡ್ ಮೂಲಕ ಜನಪ್ರಿಯವಾಗಿರುವ ಸಿರಿಧಾನ್ಯಗಳ ವಿವಿಧ ಉತ್ಪನ್ನಗಳು, ಚಪಾತಿ, ಕುಕ್ಕೀಸ್, ಸಾವಯವ ಬೆಲ್ಲದ ಪುಡಿಗಳನ್ನು ಮಾರುಕಟ್ಟೆಯಲ್ಲಿ ವಿತರಿಸುತ್ತಿದ್ದು ಬೃಹತ್ ಗ್ರಾಹಕ ಜಾಲವನ್ನು ಹೊಂದಿದ್ದಾರೆ.
ಇದೀಗ ಹಲಸಿನ ಬೀಜಗಳ ಉತ್ಪನ್ನಗಳನ್ನು ಸಂಶೋಧಿಸಿ ನೂತನ ಹಲಸಿನ ಬೀಜದ ಕುಕ್ಕೀಸ್, ಬಿಸ್ಕಿಟ್’ಗಳನ್ನು ಉತ್ಪಾಡಿಸಿದ್ದು ಮುಂದೆ ಇನ್ನೂ ಹಲವು ಉತ್ಪನ್ನಗಳನ್ನು ತರಲಿದ್ದಾರೆ.
ರೈತರ ಆರ್ಥಿಕ ಬಲವರ್ಧನೆ
ಪ್ರಸ್ತುತ ಹಲಸಿನ ಹಣ್ಣಿನ ಸೊಳೆಗಳನ್ನು ತಿಂದು ಬೀಜಗಳನ್ನು ಅರೆ ಉಪಯೋಗಿಸುವ ಇಲ್ಲವೇ ಬಿಸಾಡುವ ಪ್ರವೃತ್ತಿ ಇರುವುದು ಸರ್ವೇ ಸಾಮಾನ್ಯವಾಗಿದೆ. ಇದೀಗ ಹಲಸಿನ ಬೀಜದ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಹಲಸಿನ ಬೀಜಗಳಿಗೆ ಉತ್ತಮ ಬೆಲೆ ಬರಲಿದೆ. ಆ ಮೂಲಕ ರೈತರ ಆದಾಯ ಮೂಲವೂ ವಿಸ್ತಾರಗೊಳ್ಳಲಿದೆ.