ದಾರುಣ ಅಂತ್ಯ ಕಂಡ ರೈಲಿನ ಬಾಗಿಲಲ್ಲಿ ನೇತಾಡುತ್ತಿದ್ದ ಪ್ರಯಾಣಿಕರು
ಮುಂಬಯಿ: ಮಹಾನಗರದ ಲೋಕಲ್ ರೈಲಿನಿಂದ ಬಿದ್ದು 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗ್ಗಿನ ಹೊತ್ತು ಕಿಕ್ಕಿರಿದು ತುಂಬಿದ್ದ ಬಾಗಿಲಲ್ಲಿ ನೇತಾಡುತ್ತಿದ್ದ ಸುಮಾರು 12-15 ಮಂದಿ ಹಳಿ ಮೇಲೆ ಬಿದ್ದಿದ್ದಾರೆ. ಈ ಪೈಕಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಕಸರಾದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಿಂದ ಹೋಗುತ್ತಿದ್ದ ಫಾಸ್ಟ್ ರೈಲಿನಲ್ಲಿ ಮುಂಬ್ರಾ ಮತ್ತು ದಿವಾ ರೈಲು ನಿಲ್ದಾಣಗಳ ನಡುವೆ ಬೆಳಗ್ಗೆ 9.30ರ ವೇಳೆಗೆ ಈ ಭೀಕರ ಅವಘಡ ಸಂಭವಿಸಿದೆ. ಬೆಳಗ್ಗಿನ ಹೊತ್ತು ಮುಂಬಯಿಯ ಲೋಕಲ್ ರೈಲುಗಳು ಕಿಕ್ಕಿರಿದು ತುಂಬಿರುತ್ತವೆ. ಬೆಳಗ್ಗೆ ಮತ್ತು ಸಂಜೆಯ ಜನದಟ್ಟಣೆಯ ಹೊತ್ತು ಜನರು ಬಾಗಿಲಲ್ಲಿ ನೇತಾಡಿಕೊಂಡು ಹೋಗುವುದು ಇಲ್ಲಿ ಸಾಮಾನ್ಯ ದೃಶ್ಯ.
ರೈಲಿನಲ್ಲಿ ಕೆಲವು ಪ್ರಯಾಣಿಕರು ಬಾಗಿಲಲ್ಲಿ ನೇತಾಡುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಅವರು ಆಯತಪ್ಪಿ ಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕನಿಷ್ಠ 15 ಪ್ರಯಾಣಿಕರು ರೈಲಿನಿಂದ ಬಿದ್ದಿರುವ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಕ್ಕಿರಿದು ತುಂಬಿದ್ದ ಫಾಸ್ಟ್ ರೈಲಿನಲ್ಲಿ ಅನೇಕ ಮಂದಿ ಪ್ರಯಾಣಿಕರು ಬಾಗಿಲಲ್ಲಿ ನೇತಾಡುತ್ತಿದ್ದರು. ಇದೇ ವೇಳೆ ಪಕ್ಕದ ಇನ್ನೊಂದು ಹಳಿಯಲ್ಲಿ ಮತ್ತೊಂದು ರೈಲು ಬಂದಿದ್ದು, ಈ ವೇಳೆ ಕೆಲವು ಪ್ರಯಾಣಿಕರು ಆಯತಪ್ಪಿ ಬಿದ್ದರು ಎಂದು ವರದಿಗಳು ತಿಳಿಸಿವೆ.
ರೈಲಿನೊಳಗಿನ ಅತಿಯಾದ ಜನಸಂದಣಿಯಿಂದಾಗಿ ಜನರು ಒಂದು ಬೋಗಿಯಿಂದ ಕೆಳಗೆ ಬೀಳಲು ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ತನಿಖೆ ನಡೆಯುತ್ತಿದೆ.