ನಾವು ತಪ್ಪೇ ಮಾಡಿಲ್ಲ, ಹೀಗಾಗಿ ಕಪ್ಪುಚುಕ್ಕೆ ಇಲ್ಲ ಎಂದು ಸಮರ್ಥನೆ
ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಸಂಪೂರ್ಣ ಹೊಣೆ ಪೊಲೀಸರದ್ದೇ, ಸರ್ಕಾರ ತಪ್ಪೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಘಟನೆಯಲ್ಲಿ ಸರ್ಕಾರ ತಪ್ಪೇ ಮಾಡಿಲ್ಲ, ಪೊಲೀಸರು ತಪ್ಪು ಮಾಡಿದ್ದಾರೆ. ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರಿಂದಲೇ ತಪ್ಪು ನಡೆದಿದೆ. ಕಾರ್ಯಕ್ರಮಕ್ಕೆ ಬಂದೋಬಸ್ತ್ ಮಾಡಿದ್ದೇವೆ ಎಂದು ತಿಳಿಸಬೇಕಾದವರು ಯಾರು? ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಏನಾದರೂ ತಿಳಿಸಬೇಕಲ್ವಾ? ಸರ್ಕಾರದ ಮುಖ್ಯ ಕಾರ್ಯದರ್ಶಿಗಾದರೂ ತಿಳಿಸಬೇಕಲ್ವಾ? ಗೃಹ ಸಚಿವರಿಗೂ ಗೊತ್ತಿಲ್ಲ. ನನಗೂ ತಿಳಿಸಿಲ್ಲ. ಈ ದುರಂತದಲ್ಲಿ ಪೊಲೀಸರೇ ತಪ್ಪಿತಸ್ಥರು ಎಂದು ಹೇಳಿದರು.
ಸಂಜೆ 3.50ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆದರೆ ನನಗೆ ಗೊತ್ತಾಗಿದ್ದು ಸಂಜೆ 5.45ಕ್ಕೆ. ಅಲ್ಲಿಯವರೆಗೆ ನನಗೆ ಏನು ನಡೆದಿದೆ ಎನ್ನುವುದೇ ಗೊತ್ತಾಗಿಲ್ಲ. ಇಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತಗೆದುಕೊಂಡಿದ್ದೇವೆ. ವಿಧಾನಸೌಧದಲ್ಲಿ ಯಾವುದೇ ದುರಂತ ಸಂಭವಿಸಿಲ್ಲ. ಸ್ಟೇಡಿಯಂನಲ್ಲಿ ನಡೆದ ದುರಂತಕ್ಕೆ ಬೆಂಗಳೂರು ನಗರ ಪೊಲೀಸರನ್ನು ಮಾತ್ರ ಅಲ್ಲ, ಡಿಸಿಪಿ, ಎಸಿಪಿ, ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಅಧಿಕಾರಿಗಳ ತಪ್ಪಿನಿಂದ ಈ ಘಟನೆ ನಡೆದಿದೆ. ವೈಯಕ್ತಿಕವಾಗಿ ನನಗೆ, ಇಡೀ ಸರಕಾರಕ್ಕೆ ಈ ಘಟನೆಯಿಂದ ನೋವಾಗಿದೆ. ನನ್ನ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದು ಹಾಕಿದ್ದೇವೆ. ತಪ್ಪು ಮಾಡಿದ್ದರೆ ಕಪ್ಪು ಚುಕ್ಕೆ ಬರುತ್ತಿತ್ತು. ನಾವು ತಪ್ಪೇ ಮಾಡೇ ಇಲ್ಲ. ಹೀಗಾಗಿ ನಮಗೆ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದರು.