ಸಿದ್ದರಾಮಯ್ಯನವರಿಗೆ ಶಾಸಕ ಸುನಿಲ್ ಕುಮಾರ್ ಪ್ರಶ್ನೆ
ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ 11 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಹುದ್ದೆಯಿಂದ ಕಿತ್ತು ಹಾಕಿದ ಕ್ರಮದ ಕುರಿತು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ನಿಮ್ಮ ʼಸಯಾಮಿʼಯಂತೆ ಸದಾ ಅಂಟಿಕೊಂಡೇ ಇರುತ್ತಿದ್ದ ಕೆ.ಗೋವಿಂದರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿದ್ದೇಕೆ? ಗೋವಿಂದರಾಜ್ ಕೊಟ್ಟ ಸಲಹೆ ಆಧರಿಸಿ ಈ ಕಾರ್ಯಕ್ರಮ ನಡೆದಿದೆ ಎಂದಾದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂಬ ಭಯಕ್ಕಾ? ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಸುನಿಲ್ ಕುಮಾರ್ ಕೇಳಿದ್ದಾರೆ.
ಗೋವಿಂದರಾಜ್ ನಿಮ್ಮ ಪಕ್ಕದಲ್ಲೇ ಕುಳಿತು ಈ ನರಹತ್ಯೆಯ ಚಿತ್ರಕತೆ ಬರೆದರೆಂಬ ಕಾರಣಕ್ಕಾ? ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲೆ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೋ ಅಥವಾ ಇವೆಲ್ಲವನ್ನು ಮೀರಿದ ಉನ್ನತ ಸಲಹೆಗಾಗಿಯೋ?
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಸನ್ಮಾನ ಕಾರ್ಯಕ್ರಮ ಬೇಡ, ವಿಜಯೋತ್ಸವವೂ ಬೇಡ ಎಂದು ಡಿಪಿಎಆರ್ ಕಾರ್ಯದರ್ಶಿಗೆ ಪೊಲೀಸರು ಪತ್ರ ಬರೆದಿದ್ದರೂ ಈ ದುರಂತಕ್ಕೆ ಅವರನ್ನು ಹೊಣೆಗಾರರಾಗಿಸಿ ಅಮಾನತು ಮಾಡುವಾಗ ಕಾರಣಗಳ ಸರಮಾಲೆಯನ್ನೇ ಕೊಟ್ಟಿರಿ. ಆದರೆ ಗೋವಿಂದರಾಜ್ ವಿಚಾರದಲ್ಲಿ ಮಾತ್ರ ಏಕೆ ಮಗುಮ್ಮಾದ ಆದೇಶ ಹೊರಡಿಸಿದಿರಿ? ಅಷ್ಟಕ್ಕೂ ಗೋವಿಂದರಾಜ್ ಎಸಗಿದ ತಪ್ಪೇನು? ಎಂಬುದು ಜನರ ಮುಂದೆ ಅನಾವರಣವಾಗಬೇಕಲ್ಲವೇ? ಅದನ್ನು ಸಾಧ್ಯಂತವಾಗಿ ವಿವರಿಸುವುದು ನಿಮ್ಮ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಗೋವಿಂದರಾಜ್ ಗೇಟ್ಪಾಸ್ ಕೊಟ್ಟ ಕಾರಣ ಹೇಳಿದರೆ ಈ ಸಾವಿನ ಮೆರವಣಿಗೆಯ ಸತ್ಯ ಹೊರ ಬೀಳುತ್ತದೆ ಎಂದು ನೀವು ಗಾಢ ಮೌನಕ್ಕೆ ಜಾರಿದ್ದೀರಾ? ವಿಪಕ್ಷ, ಮಾಧ್ಯಮದ ಪ್ರಶ್ನೆಗೆ ಎಲ್ಲಿ ಸಾಕ್ಷಿ ಕೊಡು ಎಂದು ಮುಗಿಬೀಳುತ್ತಿದ್ದ ನೀವು ಈಗ ಇಡೀ ರಾಜ್ಯವೇ ಕಾರಣ ಕೇಳುತ್ತಿದ್ದರೂ ಬಾಯಿ ಬಿಗಿದು ಕುಳಿತಿದ್ದೇಕೆ? 11 ಜನರ ಸಾವಿನ ಸಂಚು ಬಯಲಾಗುತ್ತದೆ ಎಂಬ ಭಯವೇ? ಎಷ್ಟೇ ಬಚ್ಚಿಟ್ಟರೂ ಕಾಡುವ ಆತ್ಮಸಾಕ್ಷಿಗೆ ವಂಚನೆ ಮಾಡಲು ಸಾಧ್ಯವೇ ಸ್ವಾಮಿ?
ಈ ಹಿಂದೆ ನಿಮ್ಮ ಅಧೀನದಲ್ಲೇ ಬರುವ ಹಣಕಾಸು ಇಲಾಖೆಯ ಮೂಲಕ ಆದ ವಾಲ್ಮೀಕಿ ನಿಗಮದ ಅವ್ಯವಹಾರ ಸಂಬಂಧ ಯಾರನ್ನೋ ಬಲಿಪಶು ಮಾಡಿದಿರಿ. ಈಗ ನಿಮ್ಮದೇ ಅಧೀನದಲ್ಲಿ ಬರುವ ಡಿಪಿಎಆರ್ ಇಲಾಖೆ ಮೂಲಕ ಆದ ತಪ್ಪಿಗೆ ಇನ್ಯಾರನ್ನೋ ಬಲಿಪಶು ಮಾಡುತ್ತೀರಾ ಎಂದು ಕೇಳಿದ್ದಾರೆ.