ಪುತ್ತೂರು: ಇತ್ತೀಚೆಗೆ ನಿಧನರಾದ ಕಳುವಾಜೆ ಜಿನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಮೃತರ ಕಿರಿಯ ಪುತ್ರ ಕಳುವಾಜೆ ಯಶವಂತ ಗೌಡರ ಮನೆಯಂಗಳದಲ್ಲಿ ನಡೆದ ನುಡಿನಮನದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಆಡಳಿತಾಧಿಕಾರಿ, ನಿವೃತ್ತ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿದರು.
ಕಾಯಕ್ಕಿಂತ ಕಾಯಕ ಮುಖ್ಯ:
ನುಡಿನಮನ ಸಲ್ಲಿಸಿ ಮಾತನಾಡಿದ ಗುಡ್ಡಪ್ಪರು ಕಾಯಕ್ಕಿಂತ ಕಾಯಕ ಮುಖ್ಯ ಎಂದು ಹೇಳಿ ಅಗಲಿದ ಜಿನ್ನಪ್ಪರ ಬದುಕಿನ ಚಿತ್ರಣವನ್ನು ಮುಂದಿಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಅವರು ದಂಡ ಪ್ರಮುಖರಾಗಿ ಸಲ್ಲಿಸಿದ್ದ ಸೇವೆ ಅವಿಸ್ಮರಣೀಯ ಎಂದರು. ಮೃತರು ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ, ಸಾವು ನಿಶ್ಚಿತ ಎಂಬ ತತ್ತ್ವಕ್ಕೆ ಬದ್ಧರಾಗಿದ್ದರು ಎಂದು ಸ್ಮರಿಸಿಕೊಂಡರು. ಆಯಾ ಕಾಲದಲ್ಲಿಯೇ ಅವರು ಗ್ರಾಮ ಪಂಚಾಯತ್ ಸದಸ್ಯರಾಗಿ ಸಮಾಜ ಸೇವೆ ಮಾಡಿದ್ದ ರೀತಿಯನ್ನು ನೆನಪಿಸಿಕೊಂಡರು. ಶಾಲೆ, ದೈವಸ್ಥಾನ, ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮಾಡಿದ್ದರು. ಕಾಯಕ್ಕೆ ಅಳಿವುoಟು, ಕರ್ಮಕ್ಕೆ ಅಳಿವಿಲ್ಲ’ ಎಂಬುದನ್ನು ಜಿನ್ನಪ್ಪರ ಜೀವನದಲ್ಲಿ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಆರಂಭದಲ್ಲಿ ಮೃತರ ಕಿರಿಯ ಸಹೋದರ, ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಅಧ್ಯಕ್ಷ, ಪುತ್ತೂರಿನಲ್ಲಿ ಬಾಲಾಜಿ ಪೈಂಟ್ಸ್ ಇದರ ಮಾಲಕ ಕಳುವಾಜೆ ವೆಂಕಟ್ರಮಣ ಗೌಡರು ಮೃತರ ಸಂಕ್ಷಿಪ್ತ ಪರಿಚಯ ಮಾಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ದುಡಿದದ್ದನ್ನು ಸ್ಮರಿಸಿಕೊಂಡು ಸರ್ವರನ್ನೂ ಸ್ವಾಗತಿಸಿದರು, ಕೊನೆಯಲ್ಲಿ ಯಶವಂತ ಕಳುವಾಜೆ ವಂದಿಸಿದರು.