ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪ್ಗಳಲ್ಲಿ ಸಂದೇಶ ಹಂಚಿಕೆ
ಮಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಕುರಿತು ಮಂಗಳೂರು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
‘ಪಿರ್ಸ ಎಪ್ಪೊಲುಂ ಇಕ್ಕಟ್ಟ್’ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಪೊಲೀಸರ ವಿರುದ್ಧ ಅವಹೇಳನಕಾರಿಯಾಗಿ ಸಂದೇಶಗಳನ್ನು ಹರಿಯಬಿಡಲಾಗಿತ್ತು. ಈ ಗ್ರೂಪ್ನಲ್ಲಿ ಅಶ್ರಫ್ ಕಿನಾರ ಕುದ್ರೋಳಿ ಎಂಬ ಹೆಸರಿನ ವ್ಯಕ್ತಿ ‘ಬ್ರೇಕಿಂಗ್…ಇದೀಗ ಸಜಿಪ, ಪಾವೂರ್ನಲ್ಲಿ ಮತ್ತೆ ಪೊಲೀಸ್ ರೈಡ್… ಅಲ್ಲಾಹನ ಸಮರ್ಪಣೆಗೆ ತಂದಿಟ್ಟ ಉಲ್ಹಿಯ ಕೊಡುವ ಹಸುಗಳನ್ನು ವಶಪಡಿಸುತ್ತಿರುವ ಪೊಲೀಸರು. ಕೇಳಿದ್ರೆ ಸರಕಾರದ ಆದೇಶದಂತೆ… ಮುಸ್ಲಿಮರ ಮತಗಳಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಮುಸ್ಲಿಮರು ಒಟ್ಟಾಗಿ ಬಿಸಿ ಮುಟ್ಟಿಸಬೇಕು’ ಎಂದು ಸಂದೇಶ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ʼ57 ಸೆಕೆಂಡ್ ಇರುವ ಇನ್ನೊಂದು ವೀಡಿಯೊ ಸಂದೇಶದಲ್ಲಿ ‘ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್, ಅಲಕ್ಕ ಪೋಯಿತಲ್ಲೇ..’ ಎಂಬುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಸಿಎಂ ಸಿದ್ದರಾಮಯ್ಯ ಫೋಟೋಗಳನ್ನು ಎಡಿಟ್ ಮಾಡಿ ಸಿಂಗರ್: ದಸ್ತಕೀರ್, ಲಿರಿಕ್ಸ್: ಸರಫ್ ವಿಟ್ಲ ಎಂದು ಬರೆದು ಬ್ಯಾರಿ ಭಾಷೆಯಲ್ಲಿ ಕಾಂಗ್ರೆಸ್ ಪಕ್ಷ, ಸರಕಾರದ ವಿರೋಧಿ ಹಾಡು ಹಾಡಿರುವ ವೀಡಿಯೋ ಮಾಡಿ ಹರಿಯಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸೈಬರ್ ಠಾಣೆ ಸಿಬ್ಬಂದಿ ಸುನಿಲ್ ಕುಮಾರ್ ನೀಡಿದ ದೂರಿನಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.