ಮಂಗಳೂರು: ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ದೇರಳಕಟ್ಟೆ ನಾಟೆಕಲ್ ರೋಡ್ ಕಣಚೂರು ಆಸ್ಪತ್ರೆಗೆ ಅನಾಮಧೇಯ ವ್ಯಕ್ತಿಯು ಕರೆ ಮಾಡಿ, ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ, 11-00 ಗಂಟೆಯೊಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೆದರಿಕೆಯ ಕರೆ ಬಂದ ಹಿನ್ನಲೆಯಲ್ಲಿ ಪೊಲೀಸರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಪರಿಶೀಲಿಸಿದಾಗ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರುದಿಲ್ಲ.
ಬಾಂಬ್ ಬೆದರಿಕೆ ಕರೆ ಹಿನ್ನಲೆಯಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯವರು ಹಾಗೂ ರೋಗಿಗಳು ಬೆದರಿಕೆಯ ಬಗ್ಗೆ ತುಂಬ ಆತಂಕಕ್ಕೆ ಒಳಗಾಗಿ ಭಯಬೀತರಾಗಿದ್ದರು. ಇದು ಹುಸಿ ಬಾಂಬ್ ಕರೆ ಎಂದು ಆ ಸಂದರ್ಭ ತಿಳಿದು ಬಂದಿತ್ತು. ಈ ಕುರಿತು ಪಿ.ಜಿ. ವಿದ್ಯಾರ್ಥಿನಿ ಡಾ.. ಚಲಸಾನಿ ಮೋನಿಕಾ ಚೌಧರಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯಿಂದ ದೂರು ಕೊಟ್ಟವರೇ ಆರೋಪಿಯಾಗಿದ್ದು ಅವರೇ ಸದರಿ ವೈಧ್ಯಕೀಯ ಕಾಲೇಜ್ ನಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದು ಸದರಿ ದಿನಾಂಕದಂದು ಸಮಿನಾರ್ ನೀಡಬೇಕಾಗಿರುವುದರಿಂದ ಸಮಿನಾರ್ ತಪ್ಪಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.