ರಾತ್ರಿ ಸರ್ಚ್ ವಾರಂಟ್ನೊಂದಿಗೆ ಹೋಗಿ ಪರಿಶೀಲನೆ
ಮಂಗಳೂರು: ಪದೇ ಪದೆ ಸಂಭವಿಸಿದ ಹತ್ಯೆಗಳಿಂದ ಪ್ರಕ್ಷುಬ್ದಗೊಂಡಿರುವ ದಕ್ಷಿಣ ಕನ್ನಡದಲ್ಲಿ ಪೊಲೀಸರ ಕಾರ್ಯಾಚರಣೆಗಳು ತೀವ್ರಗೊಂಡಿದೆ. ಹಿಂದೂ ಕಾರ್ಯಕರ್ತರನ್ನು ಮತ್ತು ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆರೋಪದ ಬೆನ್ನಲ್ಲೇ ಪೊಲೀಸರು ಬುಧವಾರ ರಾತ್ರಿ ಬಜರಂಗದಳದ ಮುಖಂಡ ಭರತ್ ಕುಮ್ಡೇಲು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಭರತ್ ಕುಮ್ಡೇಲು ಮನೆ ಶೋಧಿಸಿದ್ದಾರೆ ಎನ್ನಲಾಗಿದೆ. ಮನೆ ಬಾಗಿಲು ಒಡೆದು ಪೊಲೀಸರು ಒಳಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಬ್ದುಲ್ ರಹಿಮಾನ್ ಹತ್ಯೆಯಲ್ಲಿ ಬಜರಂಗದಳ ಮುಖಂಡ ಭರತ್ ಕುಮ್ಡೇಲು ಶಾಮೀಲಾಗಿದ್ದಾರೆ ಎಂದು ಕೆಲವು ಮುಸ್ಲಿಮ್ ಮುಖಂಡರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಭರತ್ ಕುಮ್ಡೇಲು ಮನೆ ಶೋಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಭರತ್ ಕುಮ್ದೆಲ್ ತಲೆಮರೆಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಿವಾಸಿಯಾಗಿರುವ ಕುಮ್ಡೇಲು ತಲೆಮರೆಸಿಕೊಂಡಿರುವ ಕಾರಣ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಮನೆ ಶೋಧಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆ ಬಾಗಿಲು ಒಡೆದು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ.