ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತ ರಾಜ್ಯದ ಆಡಳಿತ ವ್ಯವಸ್ಥೆಯ ಸಂಪೂರ್ಣ ದಿವಾಳಿತನವನ್ನು ಬಹಿರಂಗಪಡಿಸಿದೆ. ಇದನ್ನು ಒಂದು ಎಚ್ಚರಿಕೆಯ ಗಂಟೆಯೆಂದು ನಾನು ಪರಿಗಣಿಸುತ್ತೇನೆ. ಇಂತಹ ಕಾಲ್ತುಳಿತದ ಜವಾಬ್ದಾರಿ ಪೂರ್ವಯೋಜನೆಯಿಲ್ಲದ, ಅತಿಯಾದ ತುರಾತುರಿಯಲ್ಲಿ ಕೈಗೊಂಡ ಆಡಳಿತಾತ್ಮಕ ತೀರ್ಮಾನಗಳ ಕಾರಣವಾಗಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವಅವರು, ಇದೊಂದು ಕ್ರಿಕೆಟ್ ತಂಡದ ಸಾಂಪ್ರದಾಯಿಕ ಸೀಜನ್ ಕೊನೆಯ ಕಾರ್ಯಕ್ರಮ. RCB ಸರ್ಕಾರದ ತಂಡವಲ್ಲ, ಇದು ಖಾಸಗಿ ಫ್ರಾಂಚೈಸಿ. ಈ ತಂಡದ ವಿಜಯಾಚರಣೆಯನ್ನು ವಿಧಾನಸೌಧದಂಥ ಗಂಭೀರ ಮತ್ತು ಗೌರವಮಯ ಜಾಗದಲ್ಲಿ ಯಾಕೆ ಆಯೋಜಿಸಲಾಯಿತು? ಈ ನಿರ್ಧಾರವನ್ನೆ ತೆಗೆದುಕೊಂಡದ್ದು ಯಾರು ಮತ್ತು ಯಾಕೆ? ಎಂದು ಪ್ರಶ್ನಿಸಿದ್ದು, ಯೋಗಿ ಆದಿತ್ಯನಾಥ ಅವರ ನೇತೃತ್ವದ ಉತ್ತರ ಪ್ರದೇಶ ಸರಕಾರವು 60 ಕೋಟಿ ಮಂದಿ ಭಾಗವಹಿಸುವ ಕುಂಭಮೇಳವನ್ನು ವ್ಯವಸ್ಥಿತವಾಗಿ ನಡೆಸಿದೆ, ಆದರೆ ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ 50 ಸಾವಿರ ಅಭಿಮಾನಿಗಳನ್ನು ಸಹ ಸಮರ್ಪಕವಾಗಿ ನಿರ್ವಹಿಸಲು ಶಕ್ತಿ ಇಲ್ಲದೆ ವಿಫಲವಾಗಿದೆ. ಇದು ಆಡಳಿತದ ಮೌಲ್ಯ ಹೀನತೆಗೆ ಪ್ರತೀಕ ಎಂದಿದ್ದಾರೆ.
ಅಭಿಮಾನಿಗಳು ಆಟಗಾರರನ್ನು ನೋಡಲು ಬಂದಿದ್ದರು. ಆದರೆ ವೇದಿಕೆಯಲ್ಲಿ ಕೇವಲ ರಾಜಕಾರಣಿಗಳು, ಸಚಿವರ ಪುತ್ರರು, ಕುಟುಂಬದವರು, ಮಾಜಿ ಶಾಸಕರು ಮಾತ್ರ ಕೂರಿದ್ದರು. ಜನಸಾಮಾನ್ಯರಿಗೆ ಕ್ರಿಕೆಟಿಗರನ್ನು ನೋಡುವ ಅವಕಾಶವೇ ಸಿಕ್ಕಿಲ್ಲ. ಕಾರ್ಯಕ್ರಮ ಆಟಗಾರರಿಗಾಗಿ ಅಲ್ಲ, ಇದೊಂದು ಶುದ್ಧ ರಾಜಕೀಯ ಶೋ ಆಗಿತ್ತು. ಇನ್ನೂ ವಿಷಾದಕರ ಅಂಶವೇನೆಂದರೆ, RCB ಆಟಗಾರರು ಓಪನ್ ಬಸ್ನಲ್ಲಿ ಸ್ಟೇಡಿಯಂಗೆ ಹೋಗುವ ಪರಿಪೂರ್ಣ ಯೋಜನೆ ಇತ್ತು. ಅಭಿಮಾನಿಗಳು ರಸ್ತೆಯ ತಡಿಗಳಲ್ಲಿ ಕಾದುಹೇಳುತ್ತಿದ್ದರೂ ಗೃಹ ಸಚಿವರು ಪರೇಡ್-ಗೆ ಅನುಮತಿ ನೀಡಲಿಲ್ಲ. ಈ ನಿರ್ಧಾರವೇ ಇವತ್ತಿನ ದುರಂತಕ್ಕೆ ಕಾರಣವಾಗಿದೆ. ಇದು ಸಂಪೂರ್ಣವಾಗಿ ಸರಕಾರದ ವಿಫಲತೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಇವರು ಅಧಿಕಾರದಲ್ಲಿರುವುದರಿಂದ ಜನಸಮೂಹ ನಿಯಂತ್ರಣದ ಹೊಣೆ ಇವರ ಮೇಲಿದೆ. ಆದರೆ ಅವರು ಈ ಹೊಣೆ ನಿರ್ವಹಿಸುವಲ್ಲಿ ಪೂರ್ಣ ವಿಫಲರಾದರು. ಜನರ ಜೀವದ ಜೊತೆ ಆಟವಾಡಿದ ಈ ನಿರ್ಲಕ್ಷ್ಯವನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.