ಸಂಭ್ರಮವನ್ನು ಸೂತಕವಾಗಿ ಬದಲಾಯಿಸಿದ ಕಾಲ್ತುಳಿತ ಘಟನೆ
ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ 11 ಜನರ ಸಾವಿಗೆ ಕಾರಣವಾದ ಘೋರ ಕಾಲ್ತುಳಿತ ದುರ್ಘಟನೆಗೆ ಸರ್ಕಾರ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ನ ಅವಿವೇಕಿ ನಿರ್ಧಾರವೇ ಕಾರಣ ಎನ್ನುವುದು ಗಾಢವಾಗಿ ಗೋಚರಿಸುತ್ತಿದೆ. ಸಿದ್ಧತೆ ಇಲ್ಲದೆ ಕಾರ್ಯಕ್ರಮ ನಡೆಸಿದರೆ ನಿಯಂತ್ರಣ ಮಾಡುವುದು ಕಷ್ಟ ಎಂದು ಪೊಲೀಸರು ತಿಳಿಸಿದ್ದರೂ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಪಟ್ಟುಹಿಡಿದು ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಕಾಲ್ತುಳಿತ ನಡೆದಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ವಿಧಾನಸೌಧದ ಮುಂದೆ ಜನ ಸೇರಿಸಲು ನಗರ ಪೊಲೀಸ್ ಆಯುಕ್ತರು ಒಪ್ಪಿಗೆ ನೀಡಿರಲಿಲ್ಲ. ಬಂದೋಬಸ್ತ್ ಮಾಡಿಕೊಳ್ಳದೆ ಏಕಾಏಕಿ ಭಾರಿ ಸಂಖ್ಯೆಯಲ್ಲಿ ಜನರಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದ್ದರು. ಏನಾದರೂ ಹೆಚ್ಚು ಕಡಿಮೆಯಾದರೆ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಪೂರ್ವಸಿದ್ಧತೆ ಮಾಡಿಕೊಂಡು ಭಾನುವಾರ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಬಹುದು ಎಂದು ಸಭೆಯಲ್ಲಿ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಭಾನುವಾರ ಬಹಳ ದಿನ ಆಗುತ್ತದೆ. ವಿದೇಶಿ ಆಟಗಾರರು ಅವರ ದೇಶಕ್ಕೆ ತೆರಳುತ್ತಾರೆ. ಹೀಗಾಗಿ ಬುಧವಾರವೆ ಕಾರ್ಯಕ್ರಮ ನಡೆಸಬೇಕು ಎಂದು ಕೆಎಸ್ಸಿಎ ಪಟ್ಟುಹಿಡಿದಿದೆ. ಕೆಎಸ್ಸಿಎ ತಾಳಕ್ಕೆ ಸರ್ಕಾರವು ಕುಣಿದಿದೆ. ಸರ್ಕಾರದ ಒತ್ತಡ ಇದ್ದ ಕಾರಣ ಪೊಲೀಸ್ ಇಲಾಖೆ ಯಾವುದೇ ಸಿದ್ಧತೆ ನಡೆಸದೆ ಅನುಮತಿ ನೀಡಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಎಲ್ಲವೂ ಅವ್ಯವಸ್ಥೆ
ಉಚಿತ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆದರೆ ಮಧ್ಯಾಹ್ನದ 3 ಗಂಟೆಯವರೆಗೆ ಎಲ್ಲಿ ಟಿಕೆಟ್ ಸಿಗಲಿದೆ ಎಂಬ ವಿವರ ಸಹ ಪ್ರಕಟವಾಗಿರಲಿಲ್ಲ. ಕೊನೆಗೆ 3 ಗಂಟೆಯ ನಂತರ ಗೇಟ್ ತೆರೆಯಲಾಗಿತ್ತು. ಒಂದು ವೇಳೆ ಮಧ್ಯಾಹ್ನ ಗೇಟ್ ಓಪನ್ ಮಾಡಿದ್ದರೆ ಮೊದಲೇ ಪ್ರೇಕ್ಷಕರು ಒಳ ಪ್ರವೇಶಿಸುತ್ತಿದ್ದರು. ಪಾಸ್ ಪ್ರಿಂಟ್ ಮಾಡಿ ನೀಡದೆ ಮೊದಲು ಬಂದವರಿಗೆ ಆದ್ಯತೆ ಎಂದು ಹೇಳಿದ್ದರಿಂದ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೀಗೆ ಸೇರಿದ ಅಭಿಮಾನಿಗಳನ್ನು ಚದುರಿಸಲು ಸಾಧ್ಯವಾಗದ ಕಾರಣ ದುರಂತ ಸಂಭವಿಸಿದೆ.
ಹೀಗೆ ನಡೆಯಿತು ದುರಂತ

ಮಧ್ಯಾಹ್ನ 3 ಗಂಟೆಗೆ ಆರ್ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದರು. ಸಂಜೆ 4.30 ಸುಮಾರಿಗೆ ವಿಧಾನಸೌಧದಲ್ಲಿ ಆರ್ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳು ವಿಧಾನಸೌಧದ ಎದುರು ಸೇರಿದ್ದರು.
ಸಂಜೆ 4.35ರ ಸುಮಾರಿಗೆ ಆರ್ಸಿಬಿ ಆಟಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸನ್ಮಾನಿಸಿದರು. ಈ ವೇಳೆ ಮಳೆ ಬಂದಿದ್ದರಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟುಕುಗೊಳಿಸಲಾಯಿತು.
ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಆರ್ಸಿಬಿ ಅಭಿಮಾನಿಗಳು ಸೇರಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 5 ಮತ್ತು 6ರ ಮುಖಾಂತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಭಿಮಾನಿಗಳು ಪಟ್ಟು ಹಿಡಿದರು. ನಂತರ, ಗೇಟ್ ನಂಬರ್ 6ರ ಮೇಲೆ ಹತ್ತಿ ಕ್ರೀಡಾಂಗಣದ ಒಳಗೆ ನುಗ್ಗುಲು ಯತ್ನಿಸಿದರು. ಈ ವೇಳೆ ಕೆಳೆಗೆ ಬಿದ್ದು ಓರ್ವ ಯುವಕ ಕಾಲು ಮುರಿದುಕೊಂಡನು.
ಗೇಟ್ ನಂ 18ರ ಬಳಿ ಅಭಿಮಾನಿಗಳಿಂದ ನೂಕುನುಗ್ಗಲು ಸಂಭವಿಸಿತು. ನೂಕುನುಗ್ಗಲಿನಿಂದ ಹಲವರು ಗಂಭೀರವಾಗಿ ಗಾಯಗೊಂಡು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಅತ್ತ ಗೇಟ್ ನಂಬರ್ 12ರಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಆಗ ಕ್ರೀಡಾಂಗಣದ ಸಿಬ್ಬಂದಿ ಗೇಟ್ ತೆರದು ಅಭಿಮಾನಿಗಳನ್ನು ಒಳಗಡೆ ಬಿಡಲು ಆರಂಭಿಸಿದರು. ಏಕಾಏಕಿ ಅಭಿಮಾನಿಗಳು ಬ್ಯಾರಿಕೇಡ್ಗಳನ್ನು ತಳ್ಳಿ ಕ್ರೀಡಾಂಗಣದ ಒಳಗೆ ನುಗ್ಗಲು ಆರಂಭಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಕುಸಿದು ಬಿದ್ದರು. ತಕ್ಷಣ ಪೊಲೀಸರು ಮಹಿಳೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರ್ಸಿಬಿ ಚೊಚ್ಚಲ ಟ್ರೋಫಿ ಗೆದ್ದಾಗಲೇ ರಾಜ್ಯದ ಹಲವೆಡೆ ಅಭಿಮಾನಿಗಳ ಅತಿರೇಕದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಿರುವಾಗ ಯಾವುದೇ ಪೂರ್ವಸಿದ್ಧತೆಯಿಲ್ಲದೆ ಸಂಭ್ರಮಾಚರಣೆಗೆ ತಯಾರಿಗೆ ರಾಜ್ಯ ಸರ್ಕಾರವೇ ಅತಿಯಾದ ಉತ್ಸಾಹ ತೋರಿದಂತೆ ಕಾಣಿಸುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ನಯಾಪೈಸೆ ತಯಾರಿ ಮಾಡಿಕೊಳ್ಳುವ ಅವಕಾಶವನ್ನು ಪೊಲೀಸರಿಗೆ ಸರ್ಕಾರ ನೀಡಲೇ ಇಲ್ಲ. ಹೀಗೆ ದುರಂತದಲ್ಲಿ ಸರ್ಕಾರದ ವೈಫಲ್ಯವೇ ಎದ್ದುಕಾಣುತ್ತಿದೆ.