ಉಪ್ಪಿನಂಗಡಿ: ಬೈಕ್ ನಲ್ಲಿ ಬಂದ ಸವಾರರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕುತ್ತಿಗೆಯಲ್ಲಿ ಇದ್ದ ಚಿನ್ನದ ಸರವನ್ನು ಎರಗಿಸಿ ಪರಾರಿಯಾದ ಘಟನೆ ನಿನ್ನೆ ನೆಲ್ಯಾಡಿ ಗ್ರಾಮದ ಪಡುಬೆಟ್ಟುವಿನಲ್ಲಿ ನಡೆದಿದೆ.
ಪಡುಬೆಟ್ಟುವಿನ ಅಲೀಮಮ್ಮ (65) ಎಂಬವರ 10 ಪವನ್ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ. ತನ್ನ ಮನೆಗೆ ಕೆಲಸಕ್ಕೆ ಬರುವಾತ ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ಬಾರದಿದ್ದಾಗ ಅವರ ಆರೋಗ್ಯ ವಿಚಾರಿಸಲು ಅಲೀಮಮ್ಮ ಅವರು ಮುದರ ಅವರ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದರಲ್ಲಿ ಬಂದ ಇಬ್ಬರು ಬೈಕ್ ನಿಲ್ಲಿಸಿ ಅಲೀಮಮ್ಮ ಅವರಲ್ಲಿ ತುಳು ಭಾಷೆಯಲ್ಲಿ ಸಿದ್ದೀಕ್ ಅವರ ಮನೆಗೆ ಹೋಗುವ ದಾರಿ ಹಾಗೂ ಮಸೀದಿ ಎಲ್ಲಿ ಬರುತ್ತದೆ ಎಂದು ಕೇಳಿದ್ದರು. ಅವರ ಗಮನ ಬೇರೆಡೆ ಹೋದಾಗ ಬೈಕ್ನ ಹಿಂಬದಿ ಸವಾರ ಅವರ ಕುತ್ತಿಗೆಯಲ್ಲಿದ್ದ 10 ಪವನ್ನ ಚಿನ್ನದ ಚೈನ್ ಅನ್ನು ಎಗರಿಸಿದ್ದಾನೆ. ಕೂಡಲೇ ಇವರು ಬೈಕ್ ಅನ್ನು ಚಲಾಯಿಸಿದ್ದು, ಆ ಸಂದರ್ಭ ಬೈಕ್ ಬಿದ್ದರೂ ಅವರು ಮತ್ತೆ ಎದ್ದುಕೊಂಡು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಎಚ್. ಗೌಡ, ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.