ಕೊಲೆಗೆ ಸಂಚು ರೂಪಿಸಿ, ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೇ 1ರಂದು ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಮಾಡಲಾಗಿತ್ತು. ಬಂಧಿತ ವ್ಯಕ್ತಿಯ ಮೇಲೆ ಪ್ರಮುಖ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪವಿದೆ.
ಬಂಧಿತನನ್ನು ಮಂಗಳೂರು ಬಜ್ಪೆ ಶಾಂತಿಗುಡ್ಡೆಯ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ದಿವಂಗತ ಬಾವ ಅಬ್ದುಲ್ ರೆಹಮಾನ್ ಎಂಬವರ ಪುತ್ರ ಅಬ್ದುಲ್ ರಜಾಕ್ (59) ಎಂದು ಗುರುತಿಸಲಾಗಿದೆ. ಪ್ರಸ್ತುತ ಫ್ಲಾಟ್ ನಂ. 605, 313 ಅಪಾರ್ಟ್ಮೆಂಟ್, ಕೆಂಜಾರು, ಮಂಗಳೂರಿನಲ್ಲಿ ವಾಸಿಸುತ್ತಿದ್ದಾನೆ.
ಈತ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಮುಜಮ್ಮಿಲ್ನ ತಂದೆ ಮತ್ತು ಮತ್ತೊಬ್ಬ ಆರೋಪಿ ನೌಶಾದ್ ವಾಮಂಜೂರ್ ಅಲಿಯಾಸ್ ಚೊಟ್ಟೆ ನೌಶಾದ್ನ ಮಾವ. ರಜಾಕ್ ತನ್ನ ನಿವಾಸದಲ್ಲಿ ಆರೋಪಿಗಳೊಂದಿಗೆ ಸಂಚು ರೂಪಿಸಿ ಕೊಲೆಯ ನಂತರ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯ ತನಿಖೆ ಮುಂದುವರಿದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.