ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗುತ್ತಿದೆ ಪ್ರಾಣಿ
ಭೋಪಾಲ: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಎರಡು ವಾರಗಳಲ್ಲಿ ನಿಗೂಢ ಪ್ರಾಣಿಯೊಂದು 6 ಮಂದಿಯನ್ನು ಕಚ್ಚಿ ಸಾಯಿಸಿದೆ. ಪ್ರಾಣಿಯಿಂದ ದಾಳಿಗೊಳಗಾದ ಎಲ್ಲರಿಗೂ ರೇಬಿಸ್ ಚುಚ್ಚುಮದ್ದನ್ನು ನೀಡಲಾಗಿತ್ತು. ಮೇ 5ರಂದು ಬೆಳಗಿನ ಜಾವ 1 ರಿಂದ 5 ಗಂಟೆ ನಡುವೆ ಈ ಘಟನೆ ನಡೆದಿದೆ.
ಗ್ರಾಮದ 17 ಮಂದಿ ಒಂದೆಡೆ ಮಲಗಿದ್ದಾಗ ನಿಗೂಢ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ಆ ಪ್ರಾಣಿ ದಾಳಿ ನಡೆಸಿದೆ. ಒಬ್ಬರು ಅಂಗಳ ಗುಡಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದೆ. ಬದುಕುಳಿದವರು ಆ ಪ್ರಾಣಿ ನಾಯಿಯಂತೆ ಕಾಣುತ್ತಿತ್ತು ಎಂದು ಹೇಳಿದ್ದಾರೆ.
ಬೊಗಳಲಿಲ್ಲ, ಗುರುಗುಟ್ಟಲೂ ಇಲ್ಲ ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಲ್ಲಾ 17 ಮಂದಿಗೆ ಬರ್ವಾನಿ ಮತ್ತು ಇಂದೋರ್ನ ವೈದ್ಯಕೀಯ ಕೇಂದ್ರಗಳಲ್ಲಿ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಆದರೆ ಮೇ 23 ಮತ್ತು ಜೂನ್ 2 ರ ನಡುವೆ, ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರು ಮತ್ತು 40 ರಿಂದ 60 ವರ್ಷ ವಯಸ್ಸಿನ ನಾಲ್ವರು ಪುರುಷರು.
40 ವರ್ಷದ ಸುನಿಲ್ ಎಂಬವರು ವೈದ್ಯರ ಸಲಹೆಯನ್ನು ಪಾಲಿಸದೆ ಇಂದೋರ್ನ ಎಂವೈ ಆಸ್ಪತ್ರೆಯಿಂದ ಹೊರನಡೆದಿದ್ದರು. ಕಾಯಿಲೆ ಉಲ್ಬಣಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಹಿಂದೆಂದೂ ಈ ರೀತಿ ಕಚ್ಚಿರುವ ಗುರುತನ್ನು ನೋಡಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೃತರ ಮೆದುಳಿನ ಅಂಗಾಂಶ, ಗಂಟಲಿನ ಬಯಾಪ್ಸಿಯನ್ನು ವಿವರವಾದ ವಿಶ್ಲೇಷಣೆಗಾಗಿ ದೆಹಲಿಗೆ ಕಳುಹಿಸಲಾಗಿದೆ. ಅವರೆಲ್ಲರ ಸಾವಿಗೆ ರೇಬಿಸ್ ಚುಚ್ಚುಮದ್ದು ಕಾರಣವೇ ಅದರ ಆ ಪ್ರಾಣಿ ಕಚ್ಚಿದ್ದು ಕಾರಣವೇ ಎಂಬುದು ತಿಳಿದು ಬರಲಿದೆ.
ಅರಣ್ಯ ಇಲಾಖೆ ಪ್ರಾಣಿಗಾಗಿ ಹುಡುಕಾಟ ನಡೆಸಿದ್ದು, ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾವುದೇ ಹೆಜ್ಜೆಗುರುತುಗಳು, ದೃಶ್ಯಗಳು, ಭೌತಿಕ ಸುಳಿವುಗಳು ಇಲ್ಲ ಎಂದು ಡಿಎಎಫ್ಒ ಆಶಿಶ್ ಬನ್ಸೋದ್ ಹೇಳಿದ್ದಾರೆ. ಕಾಡು ಗ್ರಾಮದಿಂದ ಕೇವಲ 4.5 ಕಿ.ಮೀ ದೂರದಲ್ಲಿದೆ. ನೀವು ರಸ್ತೆಯಲ್ಲಿ ವಾಹನದಲ್ಲಿ ಹೋಗಿ ಅಂತಹ ಪ್ರಾಣಿಯನ್ನು ಹಿಡಿಯಲು ಸಾಧ್ಯವಿಲ್ಲ. ಡ್ರೋನ್ಗಳನ್ನು ಬಳಸಿ, ತಂಡಗಳ ಸಂಖ್ಯೆಯನ್ನು ಹೆಚ್ಚಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.