ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್ ಎಸ್, ಬಿಜೆಪಿ, ಸಂಘ ಪರಿವಾರ ಸಂಘಟನೆಯ ಮುಖಂಡರನ್ನು ಟಾರ್ಗೆಟ್ ಮಾಡಿ ಗಡಿಪಾರು ಮಾಡುವ ಜತೆಗೆ ರಾತ್ರಿ ಹೊತ್ತಿನಲ್ಲಿ ಹಿಂದೂ ಮುಖಂಡರ ಮನೆಗಳಿಗೆ ತೆರಳಿ ಫೋಟೊ ತೆಗೆದು ಜಿಪಿಎಸ್ ಮಾಡುತ್ತಿರುವ ಪ್ರಕರಣ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು, ಏನಾದರೂ ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೊಣೆ. ನಿಮ್ಮ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಈ ರೀತಿ ಸರಕಾರದ ಕುಮ್ಮಕ್ಕಿನಲ್ಲಿ ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾಡಿದ್ದಾರೆ.
ದ.ಕ. ಜಿಲ್ಲೆ ನಮಗೆ ಹೊಸತೇನಲ್ಲ. ನಿಮ್ಮಅಸಹಾಯಕತೆಗೆ ಫೋಟೊ ಜಿಪಿಎಸ್ ಮಾಡಲಾಗುತ್ತಿದೆ. ಜಿಪಿಎಸ್ ಫೋಟೊಗಳು ಕೊಲೆಗಡುಕರೆ ಕೈಗೆ ಸಿಗಲ್ಲ ಎಂಬುದು ಏನು ಗ್ಯಾರಂಟಿ. ನಿಮ್ಮ ವೈಫಲ್ಯ ಮುಚ್ಚಲು ನೀವು ಈ ರೀತಿ ಮಾಡುತ್ತಿದ್ದು, ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇಂತಹಾ ದುಸ್ಸಾಹಸ ಕ್ರಮವನ್ನು ತಕ್ಷಣ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ನಿಮಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಯಾರು ದುಬೈ ಮುಂತಾದ ಕಡೆಗಳಲ್ಲಿ ಕುಳಿತು ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಬಂಧಿಸಿ. ಅದನ್ನು ಬಿಟ್ಟು ಅಮಾಯಕರ ಮನೆಗೆ ತೆರಳಿ ಫೋಟೊ ತೆಗೆಯುವ ಕೆಲಸಕ್ಕೆ ಕೈಹಾಕುತ್ತಿದ್ದೀರಿ. ಇಂತಹಾ ಕೆಟ್ಟ ರಾಜಕಾರಣ ಹಿಂದೆಂದೂ ಕಂಡಿಲ್ಲ ಎಂದು ಅವರು ತಿಳಿಸಿದರು.
ಟ್ಯಾಕ್ಸ್ ಕಟ್ಟಿದ ಹಣವನ್ನು ಪೋಲು ಮಾಡುತ್ತಿದ್ದೀರಿ. ಗ್ಯಾರಂಟಿ ಎಂದು ಸುಳ್ಳು ಹೇಳಿದ್ದೀರಿ. 60 ಶೇ. ದುಡ್ಡು ತೆಗೆದುಕೊಳ್ಳುವುದರ ಜತೆಗೆ ಗ್ಯಾರಂಟಿ ಫೈಲ್ ಆದಾಗ ಕೋಮು ಗಲಭೆ ಎಬ್ಬಿಸಿ ಅಮಾಯಕರನ್ನು ಕೊಲ್ಲುತ್ತಿದ್ದೀರಿ. ದ.ಕ.ಜಿಲ್ಲೆಯಲ್ಲಿ ಹಿಂದೂ ನಾಯಕರಿಗೆ ಏನಾದರೂ ಪ್ರಾಣಕ್ಕೆ ಅಪಾಯವಾದರೆ ಅದಕ್ಕೆ ನೇರ ಹೊಣೆ ದ.ಕ. ಪೊಲೀಸ್ ಹಾಗೂ ಸಿದ್ಧರಾಮಯ್ಯ ಸರಕಾರ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಕಾರಣವಿಲ್ಲದೆ ಫೋಟೊ ತೆಗೆದುಕೊಂಡು ಜಿಪಿಎಸ್ ಯಾಕೆ ಮಾಡುತ್ತೀರಿ, ಅಷ್ಟು ಪೊಲೀಸ್ ಇಲಾಖೆಗೆ ಕಾಮನ್ ಸೆನ್ಸ್ ಇಲ್ಲವಾ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಇಲಾಖೆ ಅಮಾಯಕರ ಸಾವಿನ ಕುರಿತು ತನಿಖೆ ಮಾಡಲಿ. ಕೇರಳದಿಂದ ದೊಡ್ಡ ಮಟ್ಟದಲ್ಲಿ ಹಲಾವಾ ಮಾಫಿಯಾ ಇದೆ, ಡ್ರಗ್ಸ್ ಬರುತ್ತಿದೆ. ಶಸ್ತ್ರಾಸ್ತ್ರಗಳನ್ನು ತರಿಸುತ್ತಿದ್ದಾರೆ. ಇದರ ಬಗ್ಗೆ ಸೀರಿಯಸ್ ಆಗಿ ತನಿಖೆ ಮಾಡುವುದು ಬಿಟ್ಟು ಸುಖಾಸುಮ್ಮನೆ ಫೋಟೊ ತೆಗೆದು ಜಿಪಿಎಸ್, ಗಡಿಪಾರಿನ ಆದೇಶ ಹೊರಡಿಸುತ್ತಾರೆ ಎಂದು ಆರೋಪಿಸಿದರು.
























