ಪುತ್ತೂರು: ನನ್ನ ಮೇಲೆ ಗಡಿಪಾರು ಆದೇಶ ಇದ್ದರೂ ಮುಂದಿನ ದಿನಗಳಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ ಇಡೀ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವ ಕೆಲಸವನ್ನು ಮಾಡಲಿದ್ದೇನೆ. ಇಂದಿನಿಂದ ರಾತ್ರಿ ಪೊಲೀಸ್ ಇಲಾಖೆ ಯಾವುದೇ ಹಿಂದೂ ಕಾರ್ಯಕರ್ತನ ಮನೆಗೆ ನುಗ್ಗುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.

ಅವರು ಮಂಗಳವಾರ ಸಂಜೆ ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ನುಗ್ಗಿ ದರ್ಪ ತೋರಿಸುತ್ತಿರುವ ಸರ್ವಾಧಿಕಾರಿ ವ್ಯವಸ್ಥೆ ಹಾಗೂ ಗಡಿಪಾರು ಆದೇಶ ವಿರೋಧಿಸಿ ನಡೆದ ಬೃಹತ್ಖಂಡನಾ ಸಭೆಯಲ್ಲಿ ಮಾತನಾಡಿದರು.
ಹಿಂದೂ ಸಮಾಜಕ್ಕೋಸ್ಕರ, ಸಂಘಟನೆಗೋಸ್ಕರ ಕೆಲಸ ಮಾಡುತ್ತಿರುವ ಹಿಂದೂ ಕಾರ್ಯಕರ್ತರ ಮೇಲೆ ಸಿದ್ಧರಾಮಯ್ಯ ಸರಕಾರ ಪೊಲೀಸರ ಮೂಲಕ ಮೇಲೆ ಸವಾರಿ ಮಾಡಿದರೆ ಅದನ್ನು ಯಾವತ್ತೂ ಹಿಂದೂ ಸಮಾಜ ಸಹಿಸುವುದಿಲ್ಲ. ಈ ರೀತಿಯ ಕೆಲಸಗಳಿಗೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಎಂದ ಅವರು, ಮೂಲ ನಂಬಿಕೆಗಳನ್ನು ಅಳಿಸಿ, ಗೋಹತ್ಯೆ, ಮತಾಂತರಕ್ಕೆ ಕುಮ್ಮಕ್ಕು ನೀಡುವ ಕೆಲಸ ಸರಕಾರದಿಂದ ಆಗುತ್ತಿದೆ. ಇದೀಗ ಗಡಿಪಾರು, ರಾತ್ರಿ ಮನೆಗೆ ನುಗ್ಗಿ ಹಿಂದೂಗಳನ್ನು ದಮನಿಸುವ ಕೆಲಸ ಮಾಡುತ್ತಿರುವ ಸರಕಾರ ಮುಂದೆ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದರ ಕುರಿತು ಆಲೋಚನೆ ಮಾಡಬೇಕಾಗಿದೆ. ಸರಕಾರದ ಈ ನಡೆಯನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಬೇರೆಯವರನ್ನು ಓಲೈಕೆ ಮಾಡಿ ಅಧಿಕಾರಕ್ಕೆ ಬರುವವರು ಬಿಜೆಪಿ ಪಕ್ಷವಲ್ಲ. ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರತಿಯೊಬ್ಬ ಹಿಂದೂ ಶ್ರಮಿಸಬೇಕಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಆರ್ ಎಸ್ ಎಸ್ ನ ಗಣರಾಜ ಭಟ್, ಪುರಾಣಗಳ ಆಶಯದಂತೆ ಹಿಂದೂ ಬದುಕು ನಡೆಸುತ್ತಿದ್ದು, ಇದೀಗ ಸಿದ್ಧರಾಮಯ್ಯ ಸರಕಾರ ಹಿಂದೂಗಳನ್ನು ವಿವಿಧ ರೀತಿಯಲ್ಲಿ ದಮನಿಸುವ ಕೆಲಸ ಮಾಡುತ್ತಿರುವುದು ದುರಾದೃಷ್ಟ. ಇಂತಹಾ ತಲೆಕೆಟ್ಟ ಸರಕಾರಕ್ಕೆ ವಿನಾಶ ಕಾಲ ಬಂದಿದೆ. ಸರಕಾರಕ್ಕೆ ಕೊನೆಯ ಮೊಳೆ ಹೊಡೆಯುವ ಕೆಲಸ ಹಿಂದೂಗಳಿಂದ ಅಲ್ಲ, ಬದಲಾಗಿ ಅಲ್ಪಸಂಖ್ಯಾತರಿಂದಲೇ ಆಗುವ ಪರಿಸ್ಥಿತಿ ಬಂದಿದೆ. ಗಡಿಪಾರು ಆದೇಶ, ರಾತ್ರಿ ಮನೆಗಳಿಗೆ ನುಗ್ಗಿ ದಮನಿಸುವ ಕೆಲಸ ಬಿಟ್ಟು ಗೋಸಾಗಾಟ, ಗಾಂಜಾ ಸಾಗಾಟ ಮಾಡುವವರನ್ನು ಯಾಕೆ ಗಡಿಪಾರು ಮಾಡುವುದಿಲ್ಲ. ಸಮಾಜಕ್ಕೋಸ್ಕರ ಪ್ರಾಣವನ್ನೇ ಅರ್ಪಿಸುವವರನ್ನು ಗಡಿಪಾರು ಮಾಡುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದ ಅವರು, ಪಾಂಡವರನ್ನು ಗಡಿಪಾರು ಮಾಡಿದ ಕೌರವರೇ ಉಳಿಯಲಿಲ್ಲ, ರಾಮನನ್ನು ಗಡಿಪಾರು ಮಾಡಿದ ರಾವಣ ಸೇನೆಯೇ ಉಳಿಯಲಿಲ್ಲ. ಇನ್ನು ಸಮಾಜಕ್ಕೋಸ್ಕರ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಅರುಣ್ ಕುಮಾರ್ ಪುತ್ತಿಲರನ್ನು ಗಡಿಪಾಡು ಮಾಡಿದರೆ ಕಾಂಗ್ರೆಸ್ ಸರಕಾರದ ಉಳಿಯಲಿದೆಯೇ ಎಂದು ತಿಳಿಸಿದರು. ಇಂತಹಾ ಕಠಿಣ ಸಂದೇಶವನ್ನು ನೀಡಲು ಸಿದ್ಧರಾಮಯ್ಯ ಸರಕಾರವೇ ಅವಕಾಶ ಮಾಡಿಕೊಟ್ಟಿದೆ. ಗಡಿಪಾರು ಯಾವತ್ತೂ ಕನಸಿನ ಮಾತು ಎಂದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಧರ್ಮಕ್ಕಾಗಿ ಶ್ರಮಿಸುತ್ತಿರುವ ಹಿಂದೂಗಳ ಮನೆಗೆ ನುಗ್ಗಿ ದಮನಿಸುವ ಕೆಲಸ, ಗಡಿಪಾರು ಆದೇಶವನ್ನು ಸಿದ್ಧರಾಮಯ್ಯ ಸರಕಾರ ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಹಿಂದೂಗಳು ತಮ್ಮೊಳಗಿನ ವೈಮನಸ್ಸು ಬಿಟ್ಟು ಒಂದಾಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ವೇದಿಕೆಯಲ್ಲಿ ನ್ಯಾಯವಾದಿ ಚಿನ್ಮಯ್ ರೈ, ಪುತ್ತಿಲ ಪರಿವಾರದ ಅಧ್ಯಕ್ಷ ಮಹೇಂದ್ರ ವರ್ಮ, ಗೌರವ ಸಲಹೆಗಾರ ಚಂದಪ್ಪ ಮೂಲ್ಯ, ಖಜಾಂಚಿ ಗಣೇಶ್, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಬಿಜೆಪಿ ಪ್ರಮುಖ ಅನಿಲ್ ತೆಂಕಿಲ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಉಮೇಶ್ ಕೋಡಿಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಜೆ.ವಿಖ್ಯಾತ್, ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಬಿಜೆಪಿ ಗ್ರಾಮಾಂತರ ಪ್ರದಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ , ಬಿಜೆಪಿ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ರತನ್ ರೈ ಕುಂಬ್ರ, ರಾಜೇಶ್ ಪರ್ಪುಂಜ, ಸತೀಶ್ ನಾಯ್ಕ್ ಪರ್ಲಡ್ಕ, ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಯತಿಂದ್ರ ಕೊಚ್ಚಿ, ವಿದ್ಯಾದರ್ ಜೈನ್, ಮುಂಡೂರ್ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ , ಕಬಕ ಪಂಚಾಯತ್ ಅಧ್ಯಕ್ಷ ವಿನಯ್ ಕಲ್ಲೇಗ, ಅರಿಯಡ್ಕ ಪಂಚಾಯತ್ ಅಧ್ಯಕ್ಷ ಸಂತೋಷ ಮನಿಯಾನಿ, ವಿಟ್ಲ ಮೂಡ್ನೂರು ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರ್, ಮಾಣಿಲ ಸೊಸೈಟಿ ಅಧ್ಯಕ್ಷ ಗೀತಾನಂದ, ಶಕ್ತಿಕೇಂದ್ರದ ಪ್ರಮುಖರಾದ ಲಕ್ಷೀಪ್ರಸಾದ್, ವಿಶ್ವನಾಥ್ ಬಲ್ಯಯ್ಯ, ಶರತ್ ರೈ, ಸಂತೋಷ ನಿಡ್ಪಳ್ಳಿ, ಪ್ರೇಮ್ ರಾಜ್ ಆರ್ಲಪದವು, ರಾಜೇಶ್ ಕರವೀರ, ನಿತಿನ್ ಹಿರೇಬಂಡಾಡಿ, ಹರೀಶ್ ಪುಣಚ, ವಸಂತ ನಾಯ್ಕ್ ಪುಣಚ, ಯುವರಾಜ್ ಅರಿಯಡ್ಕ, ಅನಿಲ್ ಮುಂಡೂರ್, ಪ್ರಜ್ವಲ್ ಘಾಟೆ, ನಾಗೇಶ್ ಇಡ್ಕಿದು, ಚಂದ್ರಶೇಖರ ಕೆದಿಲ, ರಾಜೇಶ್ ನೆಕ್ಕಿಲಾಡಿ, ಪ್ರವೀಣ್ ಭಂಡಾರಿ, ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಡಾ! ಅಜಿತ್ ಶಂಕರ್ ಮಾಣಿಲ, ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮರುವಾಳ, ಜಿಲ್ಲಾ ಮಹಿಳಾ ಮೋರ್ಚಾ ಮಲ್ಲಿಕಾ ಪ್ರಸಾದ್, ತಾಲೂಕು ಮಹಿಳಾ ಮೋರ್ಚಾ ಜಯಲಕ್ಷ್ಮಿ ಶೆಗ್ರಿತಾಯ ಉಪಸ್ಥಿತರಿದ್ದರು.