ಸಿಂಧೂ ನದಿ ಒಪ್ಪಂದ ಪರಿಣಾಮ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಇಳಿಮುಖ
ಇಸ್ಲಾಮಾಬಾದ್ : ಉಗ್ರರನ್ನು ಪೋಷಿಸುವ ಪಾಕಿಸ್ತಾನಕ್ಕೆ ಬುದ್ಧಿಕಲಿಸಲು ಭಾರತ ಕೈಗೊಂಡ ಸಿಂಧೂ ಜಲ ಒಪ್ಪಂದ ರದ್ದತಿಯ ಪರಿಣಾಮ ಈಗಲೇ ಅಲ್ಲಿ ಗೋಚರಿಸತೊಡ ಗಿದೆ. ಪಾಕಿಸ್ತಾನಕ್ಕೆ ಹೋಗುತ್ತಿದ್ದ ಬಹುಪಾಲು ನೀರನ್ನು ತಡೆ ಹಿಡಿದ ಪರಿಣಾಮ ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಲ್ಲಿನ ಪ್ರಮುಖ ಬೆಳೆಗಳು ಕೂಡ ಅಪಾಯದಲ್ಲಿವೆ.
ವಿದೇಶಗಳಲ್ಲಿ ಭಿಕ್ಷಾಟನೆ ಮಾಡಿ ದುಡ್ಡು ಸಂಗ್ರಹಿಸಿ ಬದುಕು ಸಾಗಿಸುತ್ತಿರುವ ಪಾಕಿಸ್ತಾನದಲ್ಲಿ ಬಿತ್ತನೆ ಕಾಲ ಬಂದಾಗ ಪರಿಸ್ಥಿತಿ ತೀರಾ ಕೆಟ್ಟದಾಗಿರಲಿದೆ. ಭಾರತ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸಿದ ನಂತರ ಪಾಕಿಸ್ತಾನದ ಪರಿಸ್ಥಿತಿ ಹದಗೆಟ್ಟಿದೆ. ದೇಶದ ಅನೇಕ ದೊಡ್ಡ ಅಣೆಕಟ್ಟುಗಳು ಬತ್ತಿ ಹೋಗುವ ಅಂಚಿಗೆ ತಲುಪಿವೆ ಎಂದು ವರದಿಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಂದು ಹೇಳಿದ್ದರು.
ತಜ್ಞರ ಪ್ರಕಾರ ಖಾರಿಫ್ ಬೆಳೆ ಬಿತ್ತನೆ ಅವಧಿಯಲ್ಲಿ ನೀರಿನ ಕೊರತೆ ಪಾಕಿಸ್ತಾನದ ಸಮಸ್ಯೆಗಳನ್ನು ಹೆಚ್ಚಿಸಲಿವೆ. ದೇಶದ ಎರಡು ಪ್ರಮುಖ ಅಣೆಕಟ್ಟುಗಳಾದ ಝೀಲಂ ನದಿಯ ಮಂಗ್ಲ ಅಣೆಕಟ್ಟು ಮತ್ತು ತರ್ಬೇಲಾದಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಇದಲ್ಲದೆ ಭಾರತವು ಚೆನಾಬ್ ನದಿಯ ನೀರಿನ ಹರಿವನ್ನು ಕಡಿಮೆ ಮಾಡಿರುವುದರಿಂದ ಸಮಸ್ಯೆ ಹೆಚ್ಚಿದೆ.
ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಮಂಗ್ಲ ಮತ್ತು ತರ್ಬೆಲಾ ಅಣೆಕಟ್ಟುಗಳ ನೀರು ನಿರ್ಣಾಯಕವಾಗಿವೆ ಎಂದು ಪಾಕಿಸ್ತಾನದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ ಹೇಳಿದೆ. ಅವುಗಳಲ್ಲಿ ನೀರಿನ ಮಟ್ಟ ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೀರಿನ ಸಮಸ್ಯೆಯನ್ನು ಎತ್ತುತ್ತಿದ್ದಾರೆ. ಈ ವಿಷಯದ ಬಗ್ಗೆ ಮಾತುಕತೆ ನಡೆಸುವಂತೆ ಶೆಹಬಾಜ್ ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಭಯೋತ್ಪಾದನೆ ಮತ್ತು ಪಿಒಕೆ ವಿಷಯಗಳನ್ನು ಮಾತ್ರ ಪಾಕಿಸ್ತಾನದೊಂದಿಗೆ ಚರ್ಚಿಸಲಾಗುವುದು ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.