ಈ ಸಲ ಕಪ್‌ ನಮ್ದೇ : ಆರ್‌ಸಿಬಿ ಚಾಂಪಿಯನ್‌ ಆಗಲು ಇನ್ನೊಂದೆ ಹೆಜ್ಜೆ ಬಾಕಿ

ನಾಳೆ ಅಹಮಬಾದಾದ್‌ನಲ್ಲಿ ಆರ್‌ಸಿಬಿ-ಪಂಜಾಬ್‌ ನಡುವೆ ಫೈನಲ್‌ ಪಂದ್ಯ

ಅಹಮದಾಬಾದ್‌ : ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್‌ ಆಗಲು ಉಳಿದಿರುವುದು ಇನ್ನು ಒಂದೇ ಪಂದ್ಯ. ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದು, ಆರ್‌ಸಿಬಿ ಕಪ್‌ ಎತ್ತಬೇಕೆಂಬ ಆರು ಕೋಟಿ ಕನ್ನಡಿಗರ ಹಾರೈಕೆ ಮುಗಿಲುಬಿಟ್ಟಿದೆ.

ಈ ಸಲ ಯಾರೇ ಗೆದ್ದರೂ ಹೊಸ ಚಾಂಪಿಯನ್‌ ಮೂಡಿಬರುವುದು ಖಚಿತ. 2014ರ ನಂತರ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿದೆ. ಜೂನ್ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯನ್ನು ಎದುರಿಸಲಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಫೈನಲ್‌ಗೆ ತಲುಪಿತ್ತು. ಪಂಜಾಬ್ ಮತ್ತು ಆರ್‌ಸಿಬಿ ಇಲ್ಲಿಯವರೆಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ, ಹೀಗಾಗಿ ಈ ಸಲ ಐಪಿಎಲ್‌ಗೆ ಹೊಸ ಚಾಂಪಿಯನ್ ಸಿಗುವುದು ಖಚಿತ. 11 ವರ್ಷಗಳ ಹಿಂದೆ 2014ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್‌ ರನ್ನರ್‌ ಅಪ್‌ ಅಗಿತ್ತು.





















































 
 

ನಿನ್ನೆ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆದ್ದುಕೊಳ್ಳುವ ಮೂಲಕ 2014ರ ನಂತರ ಎರಡನೇ ಬಾರಿಗೆ ಐಪಿಎಲ್ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟದ ಫಲವಾಗಿ ಇನ್ನೊಂದು ಓವರ್ ಬಾಕಿ ಇರುವಂತೆಯೇ ದಾಖಲೆಯ ಗೆಲುವು ಸಾಧಿಸಿತು.

ಮಳೆ ಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 203 ರನ್ ಗಳಿಸಿತು. ಮಳೆಯಿಂದಾಗಿ ಪಂದ್ಯ ಎರಡು ಗಂಟೆ 15 ನಿಮಿಷ ತಡವಾಗಿ ಆರಂಭವಾದರೂ ಓವರ್‌ಗಳನ್ನು ಕಡಿಮೆ ಮಾಡಲಿಲ್ಲ. ಆದಾಗ್ಯೂ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಕೇವಲ 8 ರನ್ ಬಾರಿಸಿ ಔಟಾದರು. ಜಾನಿ ಬೈರ್‌ಸ್ಟೋವ್ ಮತ್ತೊಮ್ಮೆ ಉತ್ತಮವಾಗಿ ಬ್ಯಾಟಿಂಗ್ ಮಾಡಿ 38 ರನ್​ಗಳ ಕಾಣಿಕೆ ನೀಡಿದರು. ಇದಾದ ನಂತರ, ಸೂರ್ಯಕುಮಾರ್ ಮತ್ತು ತಿಲಕ್ ಮೂರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ಮುಂಬೈ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು.

ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದ ನಂತರ, ಮುಂಬೈ ಇನ್ನಿಂಗ್ಸ್ ನಿಧಾನವಾಯಿತು. ಆದಾಗ್ಯೂ, ಕೊನೆಯಲ್ಲಿ ನಮನ್ ಧೀರ್ ಹೊಡಿಬಡಿ ಆಟದ ಮೂಲಕ ಮುಂಬೈ ತಂಡದ ಸ್ಕೋರ್ ಅನ್ನು 200 ದಾಟಿಸಿದರು. ನಮನ್ 37 ರನ್ ಗಳಿಸಿ ಔಟಾದರೆ, ನಾಯಕ ಹಾರ್ದಿಕ್ ಪಾಂಡ್ಯ 15 ರನ್ ಗಳಿಸಿ ಔಟಾದರು. ಪಂಜಾಬ್ ಪರ ಅಜ್ಮತುಲ್ಲಾ ಎರಡು ವಿಕೆಟ್ ಪಡೆದರೆ, ಜೇಮಿಸನ್, ಸ್ಟೊಯಿನಿಸ್, ವಿಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಈ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ಗೂ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 72 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ನಂತರ ಶ್ರೇಯಸ್ ಮತ್ತು ನೆಹಾಲ್ ವಧೇರಾ ನಾಲ್ಕನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನಡೆಸಿದರು. ಈ ಸಮಯದಲ್ಲಿ, ಶ್ರೇಯಸ್ 27 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಶ್ರೇಯಸ್ ಮತ್ತು ವಧೇರಾ ನಡುವಿನ ಜೊತೆಯಾಟವನ್ನು ಅಶ್ವಿನಿ ಕುಮಾರ್ 48 ರನ್ ಬಾರಿಸಿದ್ದ ವಧೇರಾ ಅವರನ್ನು ಔಟ್ ಮಾಡುವ ಮೂಲಕ ಮುರಿದರು. ಆದರೆ ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಕೊನೆಯವರೆಗೂ ಅಜೇಯರಾಗಿ ಉಳಿದು 19ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಶ್ರೇಯಸ್ 41 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 87 ರನ್ ಗಳಿಸಿ ಅಜೇಯರಾಗುಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top