ವೀಣಾ ಬನ್ನಂಜೆಯವರ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ

ಪುತ್ತೂರು: ನಮ್ಮ ನಿತ್ಯ ಜೀವನದ ವ್ಯವಹಾರಗಳು ಹಾಗೂ ವೈಯಕ್ತಿಕ ಬದುಕನ್ನು ಎತ್ತರಕ್ಕೆ ಏರಿಸುವಲ್ಲಿ ಆಧ್ಯಾತ್ಮಿಕ ಜ್ಞಾನದ ಅಗತ್ಯವಿದೆ. ಆದ್ದರಿಂದ ಭಾಗವತ ಪ್ರವಚನ ಎಂಬುದು ಒಂದು ಸದಭಿರುಚಿಯ ಹಾಗೂ ನಮ್ಮ ಜ್ಞಾನವನ್ನು ವಿಸ್ತರಿಸುವ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಪುತ್ತೂರಿನ ಮಂದಿ ಸಾಕಷ್ಟು ಸ್ಪಂದಿಸುತ್ತಾರೆ ಎಂದು ಜಿ.ಎಲ್.ಆಚಾರ್ಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು.

ಅವರು ಭಾನುವಾರ ಸಂಜೆ ನಗರದ ದರ್ಶನ ಕಲಾ ಮಂದಿರದಲ್ಲಿ ಬಹುವಚನಂ ಪುತ್ತೂರು, ದಿ.ಜಿ.ಎಲ್.ಆಚಾಐ ಜನ್ಮಶತಾಬ್ಧಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಾಮಿ ಕಲಾಮಂದಿರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವೀಣಾ ಬನ್ನಂಜೆಯವರ ಶ್ರೀಮದ್ಭಾಗವತ ಪ್ರವಚನ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಭಾಗವತದಲ್ಲಿ ಶ್ರೀಕೃಷ್ಣನೇ ಕೇಂದ್ರ ಬಿಂದು. ಆ ಭಗವಂತನಿಗೆ ಗೋವುಗಳೇ ಪ್ರೀತಿಪಾತ್ರವಾದವುಗಳು. ಗೋವನ್ನು ನಾವು ಸಾಕುತ್ತೇವೆ ಅನ್ನುವುದಕ್ಕಿಂತ ನಮ್ಮನ್ನು ಗೋವು ಸಾಕುತ್ತದೆ ಎಂಬುದು ಹೆಚ್ಚು ಅರ್ಥಪೂರ್ಣವಾದ ಸಂಗತಿ. ಆದ್ದರಿಂದ ಗೋವಿನ ಪೂಜೆಯೇ ಶ್ರೀಕೃಷ್ಣನ ಪೂಜೆ ಎಂದು ನಾವು ಭಾವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಸಾಕಬೇಕು, ಅವುಗಳ ಸೇವೆ ಮಾಡಬೇಕು ಎಂದು ಕರೆ ನೀಡಿದರು.





















































 
 

ನಿವೃತ್ತ ಸರ್ಕಾರಿ ವೈದ್ಯ ಡಾ.ರಘು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಗವದ್ಗೀತೆ ಅತ್ಯಂತ ಪವಿತ್ರವಾದದ್ದು. ಗೀತೆಯ ಸಂದೇಶಗಳನ್ನು ದೇಶಕ್ಕೆ ಮಾತ್ರವಲ್ಲದೆ ವಿದೇಶಗಳಿಗೂ ತಲಪಿಸುವಲ್ಲಿ ಪ್ರವಚನಗಳು ಪರಿಣಾಮಕಾರಿ ಎಂದು ನುಡಿದರು.

ವೇದಿಕೆಯಲ್ಲಿ ಸ್ವಾಮಿ ಕಲಾಮಂದಿರದ ಮಾಲಕ ಮಾಧವ ಸ್ವಾಮಿ ಉಪಸ್ಥಿತರಿದ್ದರು. ಬಹುವಚನಂ ಪುತ್ತೂರಿನ ಸದಸ್ಯೆ ಪ್ರಿಯಂವದಾ ಪ್ರಾರ್ಥಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಸ್ವಾಗತಿಸಿ, ಬಹುವಂಚನಂನ ಸಂಚಾಲಕ ಡಾ.ಶ್ರೀಶಕುಮಾರ್ ಪ್ರಸ್ತಾವನೆಗೈದು, ವಂದಿಸಿದರು. ರಂಗತಜ್ಞ ಐ.ಕೆ.ಬೊಳುವಾರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ತರುವಾಯ ವಿಣಾ ಬನ್ನಂಜೆಯವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top