ಉಸ್ತುವಾರಿ ಹೊರೆಯಲ್ಲ, ಲಾಬಿ ನಡೆಯುತ್ತಿಲ್ಲ ಎಂದು ಸ್ಪಷ್ಟನೆ
ಬೆಂಗಳೂರು: ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಬೇಡವೆಂದು ಹೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ದಿನೇಶ್ ಗುಂಡೂರಾವ್ಗೆ ದಕ್ಷಿಣ ಕನ್ನಡದ ಉಸ್ತುವಾರಿ ಜವಾಬ್ದಾರಿ ಹೊರೆಯಾಗಿದೆ, ಹೀಗಾಗಿ ಅವರು ಉಸ್ತುವಾರಿ ಬದಲಾಯಿಸಲು ಮುಖ್ಯಮಂತ್ರಿಯನ್ನು ಕೋರಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.
ಇದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ನನ್ನ ವಿರುದ್ಧ ಸ್ಥಳೀಯ ಲಾಬಿ ಇಲ್ಲ. ಕೆಲವರು ಏನೋ ಹೇಳಬಹುದು, ಮೃತನ ಮನೆಗೆ ಹೋಗಿದ್ದೆ, ಅವನು ಎಲ್ಲರ ಜೊತೆ ಚೆನ್ನಾಗಿದ್ದ. ಹಿಂದೂಗಳ ಜೊತೆಗೂ ಚೆನ್ನಾಗಿದ್ದ ಅವನನ್ನ ಸಾಯಿಸಿ ಬಿಟ್ರು ಎಂಬ ಮಾತುಗಳು ಕೇಳಿಬಂತು ಎಂದಿದ್ದಾರೆ.
ಉಸ್ತುವಾರಿ ಬದಲಾವಣೆ ಕೇಳಿಲ್ಲ, ಅವೆಲ್ಲ ಸುಮ್ಮನೆ ಎಲ್ಲಿಂದ ಬಂತೋ ಗೊತ್ತಿಲ್ಲ. ಜವಾಬ್ದಾರಿ ಇದ್ದಾಗ ಒಂದೊಂದು ಸಂದರ್ಭದಲ್ಲಿ ಎಲ್ಲವನ್ನೂ ಎದುರಿಸಬೇಕಾಗುತ್ತದೆ. ನಾನು ಉತ್ಸಾಹದಲ್ಲೇ ಇದ್ದೇನೆ. ಜವಾಬ್ದಾರಿ ಇದ್ದಾಗ ಕೆಲವನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ನನ್ನ ಉಸ್ತುವಾರಿ ಭೇಟಿ ಬಗ್ಗೆ ಎಲ್ಲರಿಗೂ ಗಮನದಲ್ಲಿ ಇದೆ. ಯಾರೋ ಒಬ್ಬರು ಇಬ್ಬರು ಹೇಳಿಕೆ ಕೊಟ್ಟಿರಬಹುದು. ವಿನಾಕಾರಣ ರಾಜಕಾರಣ ಮಾಡಬಹುದು. ನಿನ್ನೆ ಮೊನ್ನೆ ಅಲ್ಲೇ ಇದ್ದೆ. ಸ್ಥಳೀಯರು ಸಹಕಾರ ಕೊಟ್ಟಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. ನಾನು ಸ್ಥಳಿಯ ಅಲ್ಲ ಹೊರಗಿನವನೇ, ಆದರೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿದ್ದ ದಿನೇಶ್ ಗುಂಡೂರಾವ್ ಮೇಲೆ ಕಾಂಗ್ರೆಸ್ನ ಕೆಲವು ಮುಸ್ಲಿಂ ಮುಖಂಡರು ಹರಿಹಾಯ್ದಿದ್ದರು. ಸುದ್ದಿಗೋಷ್ಠಿಯಲ್ಲಿ ಓರ್ವ ಮುಸ್ಲಿಂ ಮುಖಂಡ ಪದೇ ಪದೆ ಕಿರಿಕ್ ಮಾಡಿದಾಗ ದಿನೇಶ್ ಗುಂಡೂರಾವ್ ಅವರನ್ನು ಹೊರಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ವಿರುದ್ಧ ಸ್ಥಳೀಯ ಕಾಂಗ್ರೆಸ್ಸಿಗರು ಅಸಮಾಧಾನಗೊಂಡಿದ್ದಾರೆ, ಅವರನ್ನು ಬದಲಾಯಿಸಲು ಒತ್ತಾಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.