ಪುತ್ತೂರು: ಬನ್ನೂರಿನ ಅಲಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 2925-26ನೆ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ‘ ಆರಂಭ 2025’ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.

ನಗರಸಭಾ ಮುಖ್ಯಾಧಿಕಾರಿ ಮಧು ಎಸ್. ಮನೋಹರ್ ಉದ್ಘಾಟಿಸಿ ಮಾತನಾಡಿ, ಮಾಡುವ ಕೆಲಸ ಸಣ್ಣದಾದರೂ ನಿರಂತರ ಪ್ರಯತ್ನ ಫಲ ನೀಡುತ್ತದೆ. ಅಂತೆಯೇ ಸಣ್ಣದಾಗಿ ಆರಂಭವಾದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಖಂಡಿತವಾಗಿಯೂ ದೊಡ್ಡದಾಗಿ ಬೆಳೆದು ಕೀರ್ತಿ ಪಡೆಯುತ್ತದೆ ಎಂದರು.
ಶಾಲಾ ಸಂಚಾಲಕ ಎವಿ ನಾರಾಯಣ ಅವರ ಗುರುಗಳಾದ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾದ ರವಿರಾಮ ಸಿದ್ದಮೂಲೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ರವಿರಾಮ ಅವರು, ಜೀವನದಲ್ಲಿ ಯಶಸ್ಸಿಗೆ ಜ್ಞಾನಾರ್ಜನೆಯ ಜೊತೆಗೆ ಪ್ರಯತ್ನ ಬೇಕು ಎಂದು ಅಭಿಪ್ರಾಯಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಮಾತನಾಡಿ, ಆಂಗ್ಲ ಭಾಷೆಯ ಜೊತೆಗೆ ಸ್ಥಳೀಯ ಭಾಷೆಗಳಿಗೂ ಆದ್ಯತೆ ನೀಡಬೇಕಿದೆ. ಎವಿಜಿ ಶಾಲೆ ಭಾರತೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಕುರಿತು ತನ್ನ ಧ್ಯೇಯ ವಾಕ್ಯದಲ್ಲೇ ಅಳವಡಿಸಿಕೊಂಡಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.
‘Treatment of women characters in the selected plays of Girish Karnad’ ಎಂಬ ಸಂಶೋಧನ ಪ್ರಬಂಧಕ್ಕೆ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ಮೋತಿಬಾಯಿಯವರನ್ನು ಸನ್ಮಾನಿಸಲಾಯಿತು. ಅವರು, ಎವಿಜಿ ಶಾಲೆಯ ಆಡಳಿತಾಧಿಕಾರಿ, ಗುಡ್ಡಪ ಗೌಡ ಬಲ್ಯರ ಜೊತೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಇಂಗ್ಲೀಷ್ ಭಾಷೆಯ ಮಹತ್ತ್ವದ ಕುರಿತು ತಿಳಿಸಿದರು.
ಸಭಾಧ್ಯಕ್ಷರಾದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ, ವಿದ್ಯೆ ಮತ್ತು ಸಂಸ್ಕೃತಿಗಳು ಎವಿಜಿ ಶಾಲೆಯಲ್ಲಿ ಹೇಗೆ ಮೇಳೈಸಿವೆ ಎಂದು ತಿಳಿಸಿದರು.
ಶಿಕ್ಷಕಿ ರಾಧಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಸ್ವಾಗತಿಸಿ, ನಿರ್ದೇಶಕ ಉಮೇಶ್ ಮಳುವೇಲು ವಂದನಾರ್ಪಣೆ ನೀಡಿದರು. ನಿರ್ದೇಶಕ ಸೀತಾರಾಮ ಕೇವಳ ಮತ್ತು ಎವಿ ನಾರಾಯಣರು ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿಯರಾದ ಸುಚಿತಾ ಮತ್ತು ಹಿತಶ್ರೀ ಅವರು ಸನ್ಮಾನ ಪತ್ರಗಳನ್ನು ವಾಚಿಸಿದರು. ಶಿಕ್ಷಕಿ ಶ್ವೇತಾ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ 6ನೆ ತರಗತಿ ವಿದ್ಯಾರ್ಥಿ ಮತ್ತು ಶಾಲಾ ನಾಯಕ ಅಧ್ವಿಕ್ ಭಂಜನ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸ್ಥಳೀಯ ನಗರಸಭಾ ಸದಸ್ಯೆ ಗೌರಿ ಬನ್ನೂರು, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಾ ಹೆಗ್ಡೆ ಮತ್ತು ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
e2528b