ಶಿವರಾಜ್ಕುಮಾರ್, ಗಣೇಶ್ ಅಭಿನಯದ ಸಿನಿಮಾ ಮಾಡುತ್ತಿದ್ದೇನೆ ಎಂದು ನಂಬಿಸಿ ವಂಚನೆ
ಬೆಂಗಳೂರು : ಕನ್ನಡದ ಖ್ಯಾತ ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಮಹಿಳೆಯೊಬ್ಬರಿಗೆ 92 ಲ.ರೂ. ವಂಚಿಸಿದ ಕುರಿತು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐ ದಾಖಲಾಗಿದೆ. ಶಿವರಾಜ್ಕುಮಾರ್, ಗಣೇಶ್ ಜೊತೆ ಸಿನಿಮಾ ಮಾಡುವುದಾಗಿ ನಂಬಿಸಿ ಮಹಿಳೆಯಿಂದ ಸೂರಪ್ಪ ಬಾಬು ಹಣ ಪಡೆದಿದ್ದರು ಎನ್ನಲಾಗಿದೆ. ಆದರೆ ನಂತರ ಸಾಲ ವಾಪಸ್ ಕೇಳಿದಾಗ ಮಹಿಳೆಗೆ ಬೆದರಿಕೆ ಹಾಕಿದರು ಎಂಬ ಆರೋಪಿಸಲಾಗಿದೆ.
ಪುನೀತ್ ರಾಜ್ಕುಮಾರ್ ನಟನೆಯ ‘ಪೃಥ್ವಿ’, ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಸೂರಪ್ಪ ಬಾಬು ಗುರುತಿಸಿಕೊಂಡಿದ್ದಾರೆ. 2023ರಲ್ಲಿ ಮಹಿಳೆಗೆ ನಿರ್ಮಾಪಕ ಸೂರಪ್ಪ ಬಾಬು ಪರಿಚಯವಾಗಿತ್ತು. ಶಿವರಾಜ್ಕುಮಾರ್, ಗಣೇಶ್ ಜೊತೆ ತಾವು ಸಿನಿಮಾ ಮಾಡುತ್ತಿರುವುದಾಗಿ ಸೂರಪ್ಪ ಬಾಬು ನಂಬಿಸಿ ಈ ಸಿನಿಮಾದ ನಿರ್ಮಾಣಕ್ಕಾಗಿ ಸಾಲ ಬೇಕು ಎಂದು ಮಹಿಳೆ ಬಳಿ ಅವರು ಕೇಳಿದ್ದರು. ಸಿನಿಮಾ ನಿರ್ಮಾಣಕ್ಕಾಗಿ ಆ ಮಹಿಳೆಯು ಹಂತ ಹಂತವಾಗಿ 92 ಲಕ್ಷ ರೂಪಾಯಿಗಳನ್ನು ನೀಡಿದ್ದರು.
ಮಹಿಳೆಯಿಂದ ಹಣ ಪಡೆದು ಕೆಲವು ದಿನಗಳು ಕಳೆದ ನಂತರ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಶಿವರಾಜ್ಕುಮಾರ್, ಗಣೇಶ್ ಜೊತೆ ಸೂರಪ್ಪ ಬಾಬು ಸಿನಿಮಾ ಮಾಡುತ್ತಿಲ್ಲ ಎಂಬುದು ಮಹಿಳೆಗೆ ಗೊತ್ತಾಯಿತು. ಬಳಿಕ ತಮ್ಮ ಹಣ ವಾಪಸ್ ನೀಡುವಂತೆ ಮಹಿಳೆ ಪಟ್ಟುಹಿಡಿದರು. ಅಲ್ಲಿಂದ ಕಿರಿಕ್ ಆರಂಭ ಆಯಿತು.
ಬರೋಬ್ಬರಿ 92 ಲಕ್ಷ ರೂಪಾಯಿ ಸಾಲ ನೀಡಿದ್ದ ಮಹಿಳೆಯು ಹಣ ವಾಪಸ್ ಕೇಳಿದಾಗ ಸೂರಪ್ಪ ಬಾಬು ಅವರು ಕೇವಲ 25 ಲಕ್ಷ ರೂಪಾಯಿ ಹಿಂದಿರುಗಿಸಿದರು. ಇನ್ನುಳಿದ ಹಣವನ್ನು ವಾಪಸ್ ಕೇಳಿದಾಗ ಮಹಿಳೆಗೆ ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ.
89lxs6