ಮಹತ್ವದ ಮಾಹಿತಿಗಳನ್ನು ರೇಖಾಚಿತ್ರದೊಂದಿಗೆ ಪಾಕ್ ಏಜೆಂಟರಿಗೆ ಕೊಡುತ್ತಿದ್ದ ಪಾತಕಿ
ಮುಂಬೈ: ದೇಶದ ಯುದ್ಧನೌಕೆಗಳು, ಜಲಾಂತರ್ಗಾಮಿಗಳ ಸೂಕ್ಷ್ಮಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಐಎಸ್ಐ ಏಜೆಂಟ್ ಒಬ್ಬನನ್ನು ಮಹಾರಾಷ್ಟ್ರದ ಥಾಣೆಯಲ್ಲಿ ಬಂಧಿಸಲಾಗಿದೆ. ಥಾಣೆಯ ಕಲ್ವಾ ನಿವಾಸಿ ಮೆಕ್ಯಾನಿಕಲ್ ಇಂಜಿನಿಯರ್ ರವೀಂದ್ರ ವರ್ಮಾ (27) ಬಂಧಿತ ಆರೋಪಿ. ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ರವೀಂದ್ರನನ್ನು ಬಂಧಿಸಲಾಗಿದೆ.
ವರ್ಮಾ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ದಕ್ಷಿಣ ಮುಂಬೈನಲ್ಲಿರುವ ನೇವಲ್ ಡಾಕ್ಯಾರ್ಡ್ಗೆ ಪ್ರವೇಶಿಸಲು ಅಧಿಕಾರವಿತ್ತು. ಈತ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿಯೂ ಪ್ರಯಾಣಿಸುತ್ತಿದ್ದ. ಡಾಕ್ಯಾರ್ಡ್ಗೆ ಮೊಬೈಲ್ ಕೊಂಡೊಯ್ಯಲು ಅನುಮತಿ ಇಲ್ಲದಿದ್ದ ಕಾರಣ ರೇಖಾಚಿತ್ರಗಳನ್ನ ಮಾಡಿಕೊಳ್ಳುತ್ತಿದ್ದ. ಅಲ್ಲಿಂದ ಆಚೆಬಂದ ನಂತರ ವಾಯ್ಸ್ ರೆಕಾರ್ಡಿಂಗ್ ಮಾಡಿ ರೇಖಾಚಿತ್ರಗಳೊಂದಿಗೆ ಮಾಹಿತಿ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ.
ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ರೇಖಾಚಿತ್ರಗಳು ಮತ್ತು ಆಡಿಯೋ ರೆಕಾರ್ಡಿಂಗ್ ಸಮೇತ ಪಾಕಿಸ್ತಾನಿ ಗುಪ್ತಚರ ಏಜೆಂಟ್ಗಳಿಗೆ ಮಾಹಿತಿ ರವಾನಿಸಿದ್ದ. ಇದಕ್ಕೆ ಪ್ರತಿಯಾಗಿ ವಿದೇಶಗಳಲ್ಲಿನ ವಿವಿಧ ಬ್ಯಾಂಕ್ ಖಾತೆಗಳಿಂದ ಭಾರಿ ಮೊತ್ತದ ಹಣ ಪಡೆದುಕೊಂಡಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಬಳಿಕ ದೇಶದಲ್ಲಿ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದವರ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಕಳೆದ ಎರಡು ವಾರಗಳಲ್ಲಿ ಸುಮಾರು 20 ಮಂದಿ ಬೇಹುಗಾರರನ್ನು ಬಂಧಿಸಲಾಗಿದೆ. ಒಂದು ದಿನದ ಹಿಂದೆಯಷ್ಟೇ ಐಎಸ್ಐ ಅಧಿಕಾರಿಗಳಿಗೆ ಭಾರತದ ಸಿಮ್ ಕಾರ್ಡ್ಗಳನ್ನು ಪೂರೈಸುತ್ತಿದ್ದ ರಾಜಸ್ಥಾನದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಫೇಸ್ಬುಕ್ನಲ್ಲಿ ಮಹಿಳೆಯಂತೆ ಡ್ರಾಮಾ ಮಾಡ್ತಿದ್ದ ಪಾಕಿಸ್ತಾನಿ ಏಜೆಂಟ್ನಿಂದ ರವೀಂದ್ರ ವರ್ಮಾ ಹನಿಟ್ರ್ಯಾಪ್ಗೆ ಒಳಗಾಗಿದ್ದ. ಬಳಿಕ ಹಣದ ಆಮಿಷ ಒಡ್ಡಿ ಆತನಿಂದ ಸೂಕ್ಷ್ಮ ಮಾಹಿತಿಗಳನ್ನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈತ 2024ರಿಂದ ಪಾಕಿಸ್ತಾನಿ ಏಜೆಂಟ್ನೊಂದಿಗೆ ಸಂಪರ್ಕದಲ್ಲಿದ್ದ. ಉದ್ದೇಶಪೂರ್ವಕವಾಗಿಯೇ ರವೀಂದ್ರ ವರ್ಮಾ ಸೂಕ್ಷ್ಮ ಮಾಹಿತಿಯನ್ನ ಪಾಕ್ ಏಜೆಂಟ್ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂಬುದೂ ಗೊತ್ತಾಗಿದೆ.
nvfns3