ಪುತ್ತೂರು : ತುಳು ಎಂಬುದು ಭಾಷೆ ಮಾತ್ರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ. ತುಳು ಮೂಲ ಜನಾಂಗದಲ್ಲಿ ಸತ್ಯ, ಧರ್ಮ ಮತ್ತು ನಿಷ್ಠೆಯಿದೆ. ಇಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಹಿಂಸೆಗಳು ತುಳು ಸಂಸ್ಕೃತಿಯಲ್ಲ. ಹೊರ ಸಂಸ್ಕೃತಿಯ ಆಗಮನದಿಂದ ಇಂತಹ ಕೃತ್ಯಗಳು ನಡೆಯುತ್ತಿದ್ದು, ಬೇರೆಯವರು ಇಲ್ಲಿಗೆ ಆಗಮಿಸಿ ನಮ್ಮ ತುಳು ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ಎವಿಜಿ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಸಿರಿಗಂಗೆ ಪ್ರಕಾಶ ತುಳುನಾಡು ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಸಹಕಾರದಲ್ಲಿ ಶ್ರೀಶಾವಾಸವಿ ತುಳುನಾಡ್(ವಿದ್ಯಾಶ್ರೀ) ಅವರು ಬರೆದ ‘ಗೇನೊದ ಬುಲೆ” ತುಳು ಬರವುದ ಮುಡಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಬೆಳವಣಿಗೆಯು ಕಷ್ಟವಿದೆ. ಅವರಿಗೆ ಅವಕಾಶಗಳು ಲಭ್ಯವಾಗುವುದು ಕಡಿಮೆ. ಅದರ ನಡುವೆ ಸಣ್ಣ ಪ್ರಾಯದಲ್ಲಿ ಶ್ರೀವಿದ್ಯಾ ಅವರು ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ತುಳು ನಾಡಿನ ಕಂಬಳವು ಕೇವಲ ಕೋಣಗಳನ್ನು ಓಡಿಸುವ ಕ್ರೀಡೆ ಮಾತ್ರವಲ್ಲ. ಕಂಬಳ ನಮ್ಮ ಅನ್ನದ ಬಟ್ಟಲು, ಕಂಬಳವೇ ನಮ್ಮ ದೇವರು ಎಂದ ಅವರು, ಶಿಕ್ಷಣದ ಕೊರತೆ ಮತ್ತು ಪ್ರೋತ್ಸಾಹದ ಕೊರತೆಯಿಂದಾಗಿ ತುಳುಮೂಲ ಜನಾಂಗವು ಸಂಕಷ್ಟ ಅನುಭವಿಸುಂತಾಗಿದೆ ಎಂದರು.
ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ ಹರನೂರ ದಾರಿ ಕವನದ ವೀಡಿಯೋ ಬಿಡುಗಡೆಗೊಳಿಸಿ ಮಾತನಾಡಿ, ಹಿಂದೆಲ್ಲಾ ಶಾಲೆಗಳಲ್ಲಿ ತುಳು ಮಾತನಾಡುವುದು ತಪ್ಪಾಗುತ್ತಿತ್ತು. ಈಗ ಶಾಲೆಗಳಲ್ಲಿ ತುಳು ಪಠ್ಯ ವ್ಯವಸ್ಥೆ ಆರಂಭಗೊಂಡಿದೆ. ಇದು ತುಳು ಭಾಷಾ ಬೆಳವಣಿಗೆಗೆ ಪೂರಕವಾಗಿದೆ. ಕಿರಿ ವಯಸ್ಸಿನ ಶ್ರೀಶಾವಾಸವಿ ಹಿರಿ ಕವಿಗಳಿಗೆ ಸಮಾನವಾಗಿ ಕವನ ಬರೆದಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಪಂಚಾಯತ್ರಾಜ್ ತಜ್ಞ ವಿಲ್ಫ್ರೆಡ್ ಡಿಸೋಜ ಮಾತನಾಡಿ, ಸಾಹಿತ್ಯ, ಲೇಖನಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ತುಳು ನಾಡಿನಲ್ಲಿ ಹಲವು ಪ್ರಾದೇಶಿಕ ಮಾತ್ರ ಭಾಷೆಯನ್ನು ಮಾತನಾಡುವವವರು ಇದ್ದರೂ ಎಲ್ಲರೂ ತುಳು ಮಾತನಾಡುತ್ತಾರೆ. ಕೊಂಕಣಿ, ಬ್ಯಾರಿ ಭಾಷೆಗಳಿಗೆ ಲಿಪಿ ಇಲ್ಲದ ಕಾರಣ ಅದನ್ನು ಕನ್ನಡದಲ್ಲಿಯೇ ಬರೆಯುತ್ತಾರೆ. ಜೊತೆಗೆ ಇಂದು ಬಿಡುಗಡೆಯಾದ ಪುಸ್ತಕಗಳ ಸಹಿತ ಹಲವು ತುಳು ಕೃತಿ, ಲೇಖನಗಳು ಕನ್ನಡದಲ್ಲಿಯೇ ಬರೆಯಲಾಗುತ್ತಿದೆ. ಇದರೊಂದಿಗೆ ಇದೀಗ ಶಾಲೆಯಲ್ಲಿ ತುಳು ಪಠ್ಯ ಇರುವುದು ಭಾಷಾ ಬೆಳವಣಿಗೆಯಲ್ಲಿ ಉತ್ತಮವಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿದ್ದೀಕ್ ನಿರಾಜೆ ಅಧ್ಯಕ್ಷತೆ ವಹಿಸಿದ್ದರು.
ಪೂವರಿ ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಹೆಬ್ಬಾರಬೈಲು ಕೃತಿ ಪರಿಚಯ ಮಾಡಿದರು. ವಕೀಲೆ ಹರೀಣಾಕ್ಷಿ ಜೆ ಶೆಟ್ಟಿ ಕೃತಿಕಾರರ ಪರಿಚಯ ಮಾಡಿದರು. ಕೃತಿಕಾರೆ ಶ್ರೀಶಾವಾಸವಿ(ಶ್ರೀವಿದ್ಯಾ) ಅನುಭವ ಹಂಚಿಕೆ ಮಾಡಿಕೊಂಡರು. ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರೂಪಿಸಿದರು.