ಉಳ್ಳಾಲ: ಮಳೆಯಾರ್ಭಟಕ್ಕೆ ದ.ಕ ಜಿಲ್ಲೆ.ಯ ಜನರಲ್ಲಿ ಆತಂಕ ಹೆಚಾಗುತ್ತಿದ್ದು, ಇದೀಗ ಉಳ್ಳಾಲದ ಮಂಜನಾಡಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದ ಪರಿಣಾಮ ಮಹಿಳೆ ಮತ್ತು ಮಗು ಅಸುನೀಗಿದ್ದಾರೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ತಾಯಿ ಮತ್ತು ಒಂದು ಮಗು ಅವಶೇಷದಡಿ ಸಿಲುಕಿದ್ದಾರೆ.
ಮಂಜನಾಡಿ ಗ್ರಾಮದ ಉರುಮನೆ ಮದಪಾಡಿಯಲ್ಲಿ ಘಟನೆ ನಡೆದಿದ್ದು, ತೋಟದ ನಡುವಿರುವ ಮನೆಯ ಮೇಲೆ ಬೃಹತ್ ಮರ ಸಹಿತ ಸುಮಾರು 30 ಅಡಿ ದರೆ ಕುಸಿದು ಬಿದ್ದಿದೆ. ಶುಕ್ರವಾರ ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಮೃತಪಟ್ಟವರನ್ನು ಪ್ರೇಮ (54) ಮತ್ತು ಮೊಮ್ಮಗ ಆರ್ಯನ್ ಎಂದು ಗುರುತಿಸಲಾಗಿದೆ.
ಘಟನೆ ನಡೆದ ವೇಳೆ ಮನೆ ಯಜಮಾನ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ, ಪುತ್ರ ಸೀತಾರಾಮ ಮತ್ತು ಅವರ ಪತ್ನಿ ಅಶ್ವಿನಿ ಮಕ್ಕಳಾದ ಆರುಣ್, ಆರ್ಯನ್ ಮಲಗಿದ್ದರು. ಸೀತಾರಾಮ ಅವರು ಮನೆಯಿಂದ ಹೊರಬರಲು ಯಶಸ್ವಿಯಾಗಿದ್ದಾರೆ. ಪ್ರೇಮಾ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಮೃತದೇಹವೂ ಮಣ್ಣಿನಡಿಯಲ್ಲೇ ಇದೆ. ಕಾಂತಪ್ಪ ಪೂಜಾರಿ ಅವರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂದುವರಿದ ರಕ್ಷಣಾ ಕಾರ್ಯ
ಅಶ್ವಿನಿ ಮತ್ತು ಆರುಣ್ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಧರೆ ಕುಸಿದ ಪರಿಣಾಮ ಮನೆ ಛಾವಣಿ ಬಿದ್ದಿದೆ. ತಾಯಿ ಮಕ್ಕಳು ಅದರಡಿ ಸಿಲುಕಿದ್ದಾರೆ. ಸ್ಥಳಕ್ಕೆ ಎನ್.ಡಿ.ಆರ್ಎಫ್, ಎಸ್.ಡಿ.ಆರ್.ಎಫ್. ತಂಡಗಳು ಆಗಮಿಸಿದೆ.
ಮಣ್ಣು ಕುಸಿದಿರುವ ಕಾರಣ ಮತ್ತು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ.