ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಸ್ವಚ್ಚತಾ ಸೇ ಸಹಕಾರ್’

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್, ದ.ಕ.ಜಿಲ್ಲಾ ಸಹಕಾರ ಇಲಾಖೆ ಹಾಗೂ ಸಂತ ಪೀಲೋಮಿನಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 ಅಂಗವಾಗಿ ‘ಸ್ವಚ್ಚತಾ ಸೇ ಸಹಕಾರ್’ ಕಾರ್ಯಕ್ರಮ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಯಿತು. 

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ ನಿರ್ಮಾಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ ಎಂಬುದು ಈ ಕಾರ್ಯಕ್ರಮದ ಧ್ಯೆಯವಾಗಿದೆ. ಇಂದು ಅಂತರಾಷ್ಟ್ರೀಯ ಸಹಕಾರಿ ದಿನಾಚರಣೆಯಾಗಿದ್ದು ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಸ್ವಚ್ಛತಾ ಸೆ ಸಹಕಾರ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ, ಹಿಂದಿನ ಕಾಲದಲ್ಲಿ ಲೇವಾದೇವಿ ವ್ಯವಸ್ಥೆಯ ಕಪಿಮುಷ್ಠಿಯಿಂದ ಸಾಮಾನ್ಯ ಜನರು ನಲುಗುತ್ತಿದ್ದರು. ಲೇವಾದೇವಿಯಿಂದ ಹೊರಬರಲು ಅಗತ್ಯದ ಹಣಕಾಸಿನ ನೆರವು ನೀಡುವ ಕಾರ್ಯಕ್ರಮ ಈ ಸಹಕಾರಿ ವ್ಯವಸ್ಥೆಯಿಂದ ಆರಂಭವಾಯಿತು. ನಾನು ನಿನಗಾಗಿ ನೀನು ನನಗಾಗಿ ನಾವು ಎಲ್ಲರಿಗಾಗಿ ಎಂಬ ನಂಬಿಕೆಯೊಂದಿಗೆ ಜನರ ಆರ್ಥಿಕ ಬದುಕನ್ನು ಸಬಲಗೊಳಿಸುವುದು ಸಹಕಾರಿಯ ಉದ್ಧೇಶವಾಗಿದೆ. ಹುಟ್ಟಿನಿಂದ ಚಟ್ಟದವರೆಗೆ ಎಂಬ ಗಾದೆ ಮಾತಿನಂತೆ ಜನತೆಯ ಬದುಕಿನ ಸಹಾಯಕ್ಕೆ ಸಹಕಾರಿ ಬ್ಯಾಂಕುಗಳು ಬದ್ಧವಾಗಿವೆ ಎಂದರು.



















































 
 

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಡಾ.ಎಸ್.ಆರ್.ಹರೀಶ್ ಆಚಾರ್ಯ ಮಾತನಾಡಿ, ಸಹಕಾರಿ ಕ್ಷೇತ್ರ ಎಂಬುದು ಜಾತ್ಯತೀತ, ವರ್ಗಾತೀತ, ವರ್ಣಾತಿತ, ಸೀಮಾತೀತ ಮತ್ತು ಯಾವುದೇ ಪಕ್ಷ ರಾಜಕೀಯದಿಂದ ಬಹು ದೂರವಾಗಿರುವುದಾಗಿದೆ. ಸ್ವಚ್ಛತೆಯ ನಿಜವಾದ ರಾಯಭಾರಿ ಮಹಾತ್ಮ ಗಾಂಧಿ. ಸ್ವಚ್ಛತೆಗೆ ಅಮೇರಿಕಾ ದೇಶ ಮಾಡೆಲ್ ಆಗಿದೆ. ಸ್ವಚ್ಛತೆಯಲ್ಲಿ ಸ್ವಯಂ ಜಾಗೃತಿ ಬೇಕು. ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬ ನಾಗರಿಕರು ಈ ಜವಾಬ್ದಾರಿಯನ್ನು ಅರಿತರೆ ಸ್ವಚ್ಚತೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಕ್ರಮಬದ್ಧವಾದ ಪಾಠ ಪ್ರವಚನಗಳಿಗೆ ಹೊರತಾಗಿ ಜೀವನದಲ್ಲಿ ಕಲಿಯುವುದು ಬಹಳಷ್ಟು ಇದೆ. ಸ್ವಚ್ಛತೆ ಎಂದರೆ ಬೀದಿ ಬದಿಯ ಸ್ವಚ್ಛತೆ ಮಾತ್ರವಲ್ಲ ಸಮಾಜದ ಸ್ವಚ್ಛತೆ ಕೂಡ ಆಗಿದೆ. ಸಮಾಜದ ಸ್ವಚ್ಚತೆಗಿಂತ ನಮ್ಮ ಮನಸ್ಸಿನ ಸ್ವಚ್ಚತೆ ಆಗಬೇಕಿದೆ ಎಂದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮಂಜುನಾಥ ಎನ್.ಎಸ್., ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎನ್.ರಘು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಂಜೀವ ಪೂಜಾರಿ, ಆದರ್ಶ ವಿವಿದೋದ್ಧೇಶ ಸಹಕಾರಿ  ಸಂಘದ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತನ್ವಿ ರೈ ಮತ್ತು ಬಳಗ ಪ್ರಾರ್ಥಿಸಿದರು. ಪಿಜಿ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಕೋ ಆರ್ಡಿನೇಟರ್ ಹರ್ಷಿತ್ ಕೆ. ಕಾರ್ಯಕ್ರಮ ನಿರೂಪಿಸಿದರು. ಸ್ನಾತ್ತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕುಮಾರ ಶಿಲ್ಪ ವಂದಿಸಿದರು. ಪಿ.ಜಿ. ಭೌತಶಾಸ್ತ್ರ ವಿಭಾಗದ ಕೋ-ಆರ್ಡಿನೇಟರ್ ವಿಪಿನ್ ನಾಯ್ಕ್ ಹಾಗೂ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಾರ್ವಜಿನಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಸಹಕರಿಸಿದರು. ಬಳಿಕ ಕಾಲೇಜು ಪರಿಸರದಲ್ಲಿ ಸ್ವಚ್ಛತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top