ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವ ನಟ
ಬೆಂಗಳೂರು: ಕಮಲಹಾಸನ್ ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದೆ. ನಿನ್ನೆಯಿಂದೀಚೆಗೆ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಕಮಲ ಹಾಸನ್ ಹೇಳಿಕೆ ವಿರುದ್ಧ ಭಾರಿ ಚರ್ಚೆ ನಡೆಯುತ್ತಿದೆ. ನಟನ ಮುಂಬರುವ ಥಗ್ಲೈಫ್ ಚಿತ್ರದ ಬಿಡುಗಡೆಯನ್ನು ತಡೆಯಬೇಕೆಂದು ಅನೇಕ ಕನ್ನಡ ಪರ ಹೋರಾಟಗಾರರು ಕರೆ ಕೊಟ್ಟಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದರು. ಆ ಬಳಿಕ ಕರ್ನಾಟಕದಲ್ಲಿ ಅವರಿಗೆ ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಬಂದಾಗಿದೆ. ಈಗ ತಮಿಳು ನಟ ಕಮಲಹಾಸನ್ ಸರದಿ. ಅವರು ಕನ್ನಡದ ಬಗ್ಗೆ ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ಶಿವರಾಜ್ಕುಮಾರ್ ಎದುರೇ ಕಮಲಹಾಸನ್ ಅವರು ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎನ್ನುವ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ‘ಥಗ್ ಲೈಫ್’ ಚಿತ್ರಕ್ಕೆ ಸಂಕಷ್ಟ ಉಂಟಾಗಿದೆ.
ಇತ್ತೀಚೆಗೆ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಚೆನ್ನೈನಲ್ಲಿ ನಡೆಯಿತು. ಇದಕ್ಕೆ ಶಿವರಾಜ್ಕುಮಾರ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಮಾತನಾಡುವಾಗ ಕಮಲಹಾಸನ್ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ‘ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು’ ಎಂದಿದ್ದಾರೆ. ಕಮಲಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜೂನ್ 5ರಂದು ‘ಥಗ್ ಲೈಫ್’ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ಈ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ನಡೆದಿದೆ. ಆದರೆ, ಈಗ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಆಗಬಾರದು ಎಂದು ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಸಿನಿಮಾ ರಿಲೀಸ್ ಹತ್ತಿರವಾದಂತೆ ಆಕ್ರೋಶ ಇನ್ನಷ್ಟು ಬಲಗೊಂಡಿದೆ.
ಪ್ರತಿ ಬಾರಿ ರಜನಿಕಾಂತ್ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಂದಷ್ಟು ಆಕ್ರೋಶ ವ್ಯಕ್ತವಾಗುತ್ತದೆ. ಈಗ ಕಮಲಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆಯೂ ವಿವಾದ ಸೃಷ್ಟಿ ಆಗಿದ್ದು, ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
‘ಥಗ್ ಲೈಫ್’ ಚಿತ್ರದಲ್ಲಿ ಅಭಿರಾಮಿ ಮತ್ತು ತ್ರಿಷಾ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ಹೀರೊ ಕಮಲಹಾಸನ್ ಮತ್ತು ನಾಯಕಿಯರ ವಯಸ್ಸಿನ ಅಂತರವೂ ಸಾಕಷ್ಟು ಟ್ರೋಲ್ ಆಗಿದೆ. ಮಣಿರತ್ನಂ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಕಮಲಹಾಸನ್ ಹಾಗೂ ಮಣಿರತ್ನಂ ಜೋಡಿ ಒಂದಾಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.