ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಆಶ್ರಯದಲ್ಲಿ, ಪುತ್ತೂರು ಘಟಕದ ಆತಿಥ್ಯದಲ್ಲಿ ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಹಕಾರದೊಂದಿಗೆ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ ಸುದಾನ ವಸತಿಯುತ ಶಾಲಾ ಆವರಣದಲ್ಲಿ ಭಾನುವಾರ ನಡೆಯಿತು.
ಬೆಳಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್ ಬಿತ್ತಿಲ್ನ ಯಜಮಾನ ಶ್ರೀಧರ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಡೋಲು ಬಾರಿಸುವ ಮೂಲಕ ಡೆನ್ನಾನ ಡೆನ್ನನ ಸ್ಪರ್ಧಾ ಕಾರ್ಯಕ್ರಮವನ್ನು ಸಂಜೀವ ಪೂಜಾರಿ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಉಡುಪಿ, ಕಾರ್ಕಳ, ಮೂಡಬಿದ್ರೆ, ಪುತ್ತೂರು ಘಟಕಗಳಿಂದ ಆಗಮಿಸಿದ ಯುವವಾಹಿನಿ ವಿವಿಧ ಘಟಕಗಳ ತಂಡಗಳಿಂದ ತುಳುನಾಡಿನ ಭೂತಾರಾಧನೆ, ನಾಗಾರಾಧನೆ ಮುಂತಾದ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಜರಗಿತು. ವಿಜಯ ಶೆಟ್ಟಿ, ನಟಿ ಶೈಲಶ್ರೀ ಮುಲ್ಕಿ, ಜೀತೇಂದ್ರ ಕುಂದೇಶ್ವರ ತೀರ್ಪುಗಾರರಾಗಿ ಸಹಕರಿಸಿದರು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವವಾಹಿನಿ ಹಾಗೂ ಬಿಲ್ಲವ ಸಂಘದಕ್ಕೆ ಅವಿನಾಭಾವ ಸಂಬಂಧವಿದ್ದು, ಯುವವಾಹಿನಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವರ್ಷಕ್ಕೊಮ್ಮೆ ಅಧ್ಯಕ್ಷರುಗಳು ಬದಲಾವಣೆಯಾದರೂ ವರ್ಷದಿಂದ ವರ್ಷಕ್ಕೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶ್ ಅಧ್ಯಕ್ಷ ಬಿ.ಎಸ್.ಸತೀಶ್ ಕುಮಾರ್ ಮಾತನಾಡಿ, ಪ್ರಸ್ತುತ ಸರಕಾರ ಮಾಡುತ್ತಿರುವ ಕೆಲಸವನ್ನು ಯುವವಾಹಿನಿ ಉತ್ತಮ ರೀತಿಯಲ್ಲಿ ಮಾಡಿಕೊಂಡು ಬರುತ್ತಿದೆ. ಇದರ ಹಿಂದೆ ಪ್ರತಿಯೊಬ್ಬ ಪದಾಧಿಕಾರಿಯ ಶ್ರಮ ಇದೆ. ಈ ನಿಟ್ಟಿನಲ್ಲಿ ಇಂದು ಯುವಕರ ಪ್ರತಿಭಾನ್ವೇಷೆ ಮಾಡುವ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದ ಅವರು, ಪ್ರತಿಭಾನ್ವೇಷಣೆ ಜತೆ ಯುವಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಈ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸುದಾನ ವಸತಿಯು ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್ ಮಾತನಾಡಿ, ಯುವಜನತೆ ವಿದ್ಯಾವಂತರಾಗಬೇಕು, ವಿಚಾರವಂತರಾಗಬೇಕು ಎಂಬ ನಾರಾಯಣ ಗುರುಗಳ ಸಂದೇಶದಂತೆ ಇಂದು ಯುವವಾಹಿನಿ ಘಟಕದಲ್ಲಿ ತೊಡಗಿಸಿಕೊಂಡವರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಯುವಕರು ಶುದ್ಧ ಮನಸ್ಸಿನಿಂದ ಯಾವುದೇ ಒಂದು ಕಾರ್ಯಕ್ರಮಗಳನ್ನು ಮಾಡಿದರೆ ನಾರಾಯಣ ಗುರುಗಳ ಸಂದೇಶಕ್ಕೆ ಅರ್ಥ ಬರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಉದ್ಯಮಿ ಸತೀಶ್ ಬಿ.., ಕರ್ನಾಟಕ ಪೊಲೀಸ್ ಇಲಾಖೆಯ ನಿವೃತ್ತ ಎಎಸ್ ಐ ಪುಷ್ಪಲತಾ, ಯುವವಾಹಿನಿ ಕೇಂದ್ರ ಸಮಿತಿ ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಅಮೈ ಪಾಲ್ಗೊಂಡಿದ್ದರು.
ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ ಇದ್ಪಾಡಿ ಉಪಸ್ಥಿತರಿದ್ದರು. ಹರೀಶ್ಶಾಂತಿ ಪ್ರಾರ್ಥನೆ ಹಾಡಿದರು. ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಪ್ರಭಾಕರ ಸಾಲ್ಯಾನ್ಸ್ವಾಗತಿಸಿದರು. ಕಾರ್ಯದರ್ಶಿ ಶರತ್ಕೈಪಂಗಳದೋಳ ವಂದಿಸಿದರು. ರಾಜೇಂದ್ರ ಬೆಜ್ಜಂಗಳ, ಸುಧಾಕರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.