ಪುತ್ತೂರು: ಮಹಿಳೆಯೊಬ್ಬರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯ ವೇಳೆ ಕಾಂಕ್ರೀಟ್ ಮಿಕ್ಸಿಂಗ್ ವಾಹನದಡಿಗೆ ಬಿದ್ದು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ಸಮೀಪ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮಾಳ ಗ್ರಾಮದ ಬಸವರಾಜರವರ ಪತ್ನಿ ಗೌರಮ್ಮ (28) ಮೃತಪಟ್ಟವರು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜದಿಂದ ಬಿಲ್ವಗಿರಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಗೆ ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು ರಾಯಚೂರು ಮೂಲದ ಒಂದೇ ಕುಟುಂಬದ ಹಲವು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಕೆಲಸ ಮಾಡುತ್ತಿರುವ ವೇಳೆ ಕಾಂಕ್ರೀಟ್ ಮಿಕ್ಸಿಂಗ್ ಮಿಲ್ಲರ್ ವಾಹನ ಹಿಂದಕ್ಕೆ ಚಲಿಸುತ್ತಿದ್ದ ಸಂದರ್ಭದಲ್ಲಿ ಗೌರಮ್ಮ ಅವರು ಆಕಸ್ಮಿಕವಾಗಿ ವಾಹನದ ಚಕ್ರದಡಿಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತಿ ಬಸವರಾಜ, ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.ಮೃತರ ಪತಿ ಬಸವರಾಜ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ