ಬೆಳ್ತಂಗಡಿ : ಯುವಕನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಶಿಬಾಜೆಯಲ್ಲಿ ನಡೆದಿದೆ. ಘಟನಾ ಕುರಿತು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಶಿಬಾಜೆ ನಿವಾಸಿಗಳಾಗಿರುವ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆ.
ಮೇ 15ರಂದು ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ಧಾರೆ. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಮತ್ತು ತಿಮ್ಮಪ್ಪ ಪೂಜಾರಿ ಎಂಬವರು ಕಬ್ಬಿಣದ ಸಲಾಕೆಯನ್ನು ಹಿಡಿದು ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪ್ರವೀಣ್ ಮನೆಯೊಳಗೆ ಹೋಗಿ ಬಾಗಿಲು ಹಾಕಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು ಹಲ್ಲೆಗೆ ಒಳಪಟ್ಟ ಪ್ರವೀಣ್ ಎಂಬವರು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಮೇ 22 ರಂದು ಬಂಧಿಸಿದ್ದಾರೆ.